ಹೊಟ್ಟೆ ತುಂಬಿದವರ ಬಿಟ್ಟಿ ಪ್ರವಚನ. (ಪ್ರಹಸನ-18)

 (ಪ್ರಹಸನ-18)

ಹೊಟ್ಟೆ ತುಂಬಿದವರ ಬಿಟ್ಟಿ ಪ್ರವಚನ.    

***********************************

 

ಬೊಮ್ಮ : ಏನಲೇ ತಿಮ್ಮಾ, ಬೆಳ್ಳಂಬೆಳಿಗ್ಗೆ ಎಲ್ಲಿಗ್ಲಾ ಹೊರಟೆ

 

ತಿಮ್ಮ : ಮತ್ತೆಲ್ಲಿಗೆ, ಮೀನು ಹಿಡಿಯೋಕೆ.

 

ಬೊಮ್ಮ : ಯಾಕಲೇ ಏನಾಯ್ತು ನಿನಗೆ, ಎಲ್ಲಾ ಬಿಟ್ಟು ಎಲ್ಲಮ್ಮಗೆ ಹೋದಂಗೆ.

 

ತಿಮ್ಮ : ನೋಡ್ಲಾ ಬೊಮ್ಮ.. 'ತಿನ್ನೋಕೆ ಮೀನು ಕೊಡಬೇಡಿ, ಮೀನು ಹಿಡಿಯೋದನ್ನ ಕಲಿಸಿ ಕೊಡಿ' ಅಂತಾ ಹಲವಾರು ಜನ ಹೊಟ್ಟೆ ತುಂಬಿದವರು ಹಸಿದವರಿಗೆ ಬಿಟ್ಟಿ ಉಪದೇಶ ಕೊಡ್ತಾನೇ ಇದ್ದಾರೆ. ಅದಕ್ಕೆ..

 

ಬೊಮ್ಮ : ಅದಕ್ಕೆ, ನೀನೇ ಮೀನು ಹಿಡಿಯೋಕೆ ಹೊರಟ್ಯಾ.

 

ತಿಮ್ಮ : ಹೂಂ ಮತ್ತೆ.. ಯಾಕಪ್ಪಾ ಬಿಟ್ಟಿ ಮೀನು ತಿನ್ನೋದು. ನಾನೇ ಹಿಡಿದು ತಿಂತೀನಿ. ನಮ್ದು ಸ್ವಾಭಿಮಾನಿಗಳ ವಂಶ ಕಣಲೇ.

 

ಬೊಮ್ಮ : ನಾನೂ ಬರ್ತೇನೆ ನಡೀಲಾ ನೀನು ಅದೆಂಗೆ ಮೀನು ಹಿಡೀತೀಯಾ ನೋಡ್ತೀನಿ. ಹೌದು ಮೀನು ಹಿಡಿಯೋಕೆ ಗಾಳ ಬಲೆ ಬೋಟು ಹುಟ್ಟು ಎಲ್ಲಾ ಎಲ್ಲಿ?

 

ತಿಮ್ಮ : ಅವುಗಳನ್ನೆಲ್ಲಾ ತಗೊಳ್ಳೋಕೆ ಎಲೈತೆ ಹಣ? ನಾವು ಮೊದಲೇ ಬಡವರು

 

ಬೊಮ್ಮ : ಹೋಗಲಿ.. ಮೀನು ಹಿಡಿಯೋಕೆ ನಿನಗೇನಿದೆ ಕ್ವಾಲಿಫಿಕೇಶನ್ನು.

 

ತಿಮ್ಮ : ಇದಕ್ಕೂ ಅದು ಬೇಕಾ? ಹೊಗೋದು, ಕೈ ಹಾಕೋದು, ಮೀನು ಹಿಡ್ಕೊಂಡು ಬರೋದು ಅನ್ಕೊಂಡಿದ್ದೆ.

 

ಬೊಮ್ಮ : ಲೆ ಲೇಲೇ ತರಲೇ ತಿಮ್ಮ. ಎಲ್ಲಾದಕ್ಕೂ ತರಬೇತಿ ಬೇಕು. ತರಬೇತಿ ಪಡಿಯೋದಕ್ಕೆ  ಕೋರ್ಸಿಗೆ ಸೇರಿಕೊಳ್ಳಬೇಕು. ಅದರಾಗೂ ಡಿಗ್ರಿ ಪಡೀಬೇಕು.

 

ತಿಮ್ಮ : ಹೌದಾ.. ಕೊರ್ಸು ಡಿಗ್ರಿ ಎಲ್ಲಿ ಕೊಡ್ತಾರಪ್ಪಾ..

 

ಬೊಮ್ಮ : ಅದಕ್ಕೆ ಶಿಕ್ಷಣ ಅಂತಾರೆ. ಅದನ್ನು ಪಡೆಯೋಕೆ ಲಕ್ಷಾಂತರ ಡೊನೇಶನ್ ಕೊಡಬೇಕು. ಭಾರೀ ಪೀಸ್ ಕಟ್ಬೇಕು. ಅದೆಲ್ಲಾ ಶ್ರೀಮಂತರಿಗೆ ಮಾತ್ರ ಸಾಧ್ಯಾ.. ನಮ್ಮಂತವರಿಗಲ್ಲ

 

ತಿಮ್ಮ : ಮತ್ತೆ ಮೀನು ಹಿಡಿಯೋದು ಕಲೀರಿ, ಕಲಿಸಿರಿ ಅಂತಾ ಹೇಳ್ತಾನೇ ಇದ್ದಾರಲ್ಲಾ, ವಿದ್ಯೇನೇ ಕಲಿಸದೇ ಹೆಂಗ್ಲಾ ಮೀನು ಹಿಡಿದು ತಿಂದು ಬದುಕೋದು

 

ಬೊಮ್ಮ : ಅದೇ ಮತ್ತೆ. ಹೇಳೋದು ಸುಲಭ, ಆದರೆ ಜಾರಿ ಮಾಡೋದು ಕಷ್ಟ. ಮೀನು ಹಿಡಿಯೊದಕ್ಕೆ ಅಂದರೆ ಕೆಲಸ ಗಿಟ್ಟಿಸೋದಕ್ಕೆ ಓದಬೇಕು. ಉಳ್ಳವರ ಮಕ್ಕಳ ಜೊತೆ ಇಲ್ಲದವರು ಪೈಪೋಟಿ ಮಾಡಬೇಕು. ಅದಕ್ಕೂ ಶಿಪಾರಸ್ಸು, ವರ್ಚಸ್ಸು, ಕಾಸು ಕರಮಣಿ ಅಂತಾ ಎಲ್ಲಾ ಇರಬೇಕು. ಆಗ ಮೀನು ಅಂದ್ರೆ ಕೆಲಸ ಹಿಡಿದು ಬದುಕಬಹುದು ಗೊತ್ತಾ.

 

ತಿಮ್ಮ : ಇಷ್ಟೆಲ್ಲಾ ಐತಾ? ನಾನೇನೋ ಸುಲಭ ಅನ್ಕೊಂಡಿದ್ದೆ. ಹೋಗಲಿ ಒಂದ್ ಸಲ ಮೀನು ಹಿಡಿಯೋಕೆ ಪ್ರಯತ್ನ ಮಾಡಬಹುದಲ್ವಾ.

 

ಬೊಮ್ಮ : ಮಾಡಬೋದು.. ಆದರೆ ಮೀನು ಹಿಡಿಯೋಕೆ ಕೆರೆ ಕಟ್ಟೆ ಹೊಳೆ ಎಲ್ಲಿವೆ ಹೇಳು. ಅವುಗಳನ್ನೆಲ್ಲಾ ಹಣ ಇದ್ದವರು ಆಕ್ರಮಿಸಿ ಆಗಿದೆ, ಇನ್ನು ನಮಗೆಲ್ಲಿದೆ ಅವಕಾಶ

 

ತಿಮ್ಮ : ಆಕಾಸಾ ನೊಡೋಕೆ ನೂಕು ನುಗ್ಗಲು ಏನಲೇ. ಬಾ ಎಲ್ಲಿ ನೀರು ಐತೋ ಅಲ್ಲಿ ಕೆಲಸಾ ಶುರು ಮಾಡೋಣ.

 

ಬೊಮ್ಮ : ತೊ ಥೋ.. ನೀರಿದ್ದಲ್ಲೆಲ್ಲಾ ಮೀನಿರೋದಿಲ್ಲಾ, ಕಂಪನಿ ಇದ್ದಲ್ಲೆಲ್ಲಾ ಕೆಲಸಾ ಸಿಗೋದಿಲ್ಲಾ ತಿಳಕೋ. ಮೀನಿದ್ದ ಜಾಗಗಳೆಲ್ಲಾ ಈಗಾಗಲೇ ಮಾಲೀಕರ ಮಕ್ಕಳಿಗೆ ಮಾರಾಟ ಆಗಿದ್ದಾವೆ. ಅವೆಲ್ಲಾ ಹಣ ಇದ್ದ ಗುತ್ತಿಗೆದಾರರ ಸೊತ್ತು

 

ತಿಮ್ಮ : ಹಿಂಗಾದರೆ ಹೆಂಗ್ಲಾ ಬೊಮ್ಮಾ. ಮೀನು ಹಿಡಿಯೋ ಪರಿಕರಗಳನ್ನು ಕೊಡದೇ, ಹಿಡಿಯೋ ವಿದ್ಯೆಯನ್ನೂ ಉಚಿತವಾಗಿ ಕಲಿಸಿ ಕೊಡದೇ, ಮೀನು ಇರೋ ಜಾಗಗಳಲ್ಲೂ ನಮ್ಮಂತವರಿಗೆ ಅವಕಾಶ ಕೊಡದೇ ಮೀನು ಹಿಡಿಯೋದನ್ನ ಕಲೀರಿ ಅಂತಾ ಪುಂಗ್ತಾವ್ರಲ್ಲಾ, ಹೆಂಗ್ಲಾ ಮಾಡೋದು

 

ಬೊಮ್ಮ : ಅದಕ್ಕೆ ಹೇಳೋದು, ಆಚಾರ ಇರೋದೇ ಹೇಳೋಕೆ, ಬದನೇಕಾಯಿ ಇರೋದೆ ತಿನ್ನೋಕೆ

 

ತಿಮ್ಮ : ಹಂಗಂತೀಯಾ? ಮೀನು ಹಿಡಿದು ಬದುಕೋ ಭಾಗ್ಯವಂತೂ ಬಡವರ ಹಣೇಲಿ ಬರೆದಿಲ್ಲ. ಈಗೇನು ಮಾಡೋದು?

 

ಬೊಮ್ಮ : ವಿಸ್ವಗುರುಗಳು ಹೇಳಿದ ಹಾಗೆ ಪಕೋಡ ಮಾರಿ ಬದುಕೋದು.

 

ತಿಮ್ಮ : ಎಲ್ಲರೂ ಪಕೋಡಾ ಮಾಡಿ ಮಾರಿದ್ರೆ ಕೊಂಡು ತಿನ್ನೋರು ಯಾರಲೇ

 

ಬೊಮ್ಮ : ಅದೂ ಆಗೋದಿಲ್ಲಾಂದ್ರೆ ಸರಕಾರ ಕೊಟ್ಟ ಬಿಟ್ಟಿ ಮೀನು ಅಂದ್ರೆ ಉಚಿತಗಳನ್ನ ಪಡೆದು ಬದುಕೋದು.

 

ತಿಮ್ಮ : ಅದಕ್ಕೂ ನಮ್ಮನ್ನ ಬಿಟ್ಟಿ ತಿನ್ನೋ ಭಿಕ್ಷುಕರು ಅಂತಾ ಹಂಗಸ್ತಾರಲ್ಲೋ. ಸ್ವಾಭಿಮಾನ ಅಡ್ಡಾ ಬರ್ತಿದೆ ಬೊಮ್ಮಾ.

 

ಬೊಮ್ಮ : ಹಂಗಸ್ತಾರೆ.. ಹಂಗಿಸದೇ ಇನ್ನೇನು ಮಾಡ್ತಾರೆ. ಹೊಟ್ಟೆ ತುಂಬಿದವರ ಹೊಟ್ಟೆ ತುಂಬಿಸೊಕೆ ನಾವು ಬೆವರು ಸುರಿಸಿ ಗೇಯ್ಮೆ ಮಾಡಿ ಆಹಾರ ಬೆಳೆದು ಕೊಟ್ಟು ಅರೆಹೊಟ್ಟೆಯಲ್ಲಿ ಮಲಗಬೇಕು. ರಕ್ತ ಬಸಿದು ಇವರ ಮನೆ ಮಂದಿರ ಇಮಾರತ್ತು ಕಟ್ಟಿಕೊಟ್ಟು ನಾವು ಗುಡಿಸಲಿನಲ್ಲೇ ಬದುಕಬೇಕು. ನಾವು ಬಳಸುವ ಸೋಪು ಪೇಸ್ಟು ಬಟ್ಟೆ ಚಪ್ಲಲಿ ಎಲ್ಲದಕ್ಕೂ ತೆರಿಗೆ ಕಟ್ಟಬೇಕು. ನಮ್ಮ ಶ್ರಮಕ್ಕೆ ಬದಲಾಗಿ ಕನಿಷ್ಟ ಅನುಕೂಲತೆ ಮಾಡಿಕೊಟ್ಟರೆ ಇವರಪ್ಪನ ಮನೆಯಿಂದ ಕೊಟ್ಟವರಂತೆ ಹಂಗಿಸ್ತಾರಲ್ಲಲೇ.

 

ತಿಮ್ಮ : ಅದೇ ನಂಗೂ ಅರ್ಥ ಆಗ್ತಿಲ್ಲ. ಅಲ್ಲಲೇ ಸಂಪತ್ತು ಸೃಷ್ಟಿಸೋರು ನಾವು. ನಮ್ಮಂತವರ ಪರಿಶ್ರಮದಿಂದಲೇ ದೇಶ ಅಭಿವೃದ್ದಿ ಹೊಂದಿರೋದು. ಆದರೆ ನಾವೇ ಶ್ರಮದಿಂದ ಸೃಷ್ಟಿಸಿದ ಸಂಪತ್ತಲ್ಲಿ ಸ್ವಲ್ಲ ಭಾಗ ನಮಗೆ ಕೊಟ್ಟರೆ ಹೊಟ್ಟೆ ತುಂಬಿದವರಿಗೆ ಯಾಕಲೇ ಈಪರಿ ಹೊಟ್ಟೆ ಉರಿ.

 

ಬೊಮ್ಮ : ಬಂಡವಾಳಶಾಹಿ ವ್ಯವಸ್ಥೆ ಇರೋದೇ ಹಿಂಗೆ. ಯಾರದೋ ಶ್ರಮ, ಇನ್ಯಾರಿಗೋ ಸಂಪತ್ತು

 

ತಿಮ್ಮ : ಹಾಗಾದರೆ ಎಲ್ಲರೂ ಸೇರಿ ಒತ್ತಾಯಿಸೋಣ. ಉಚಿತ ಯೋಜನೆಗಳು ನೀವು ಕೊಡುವ ಭಿಕ್ಷೆಯಲ್ಲಾ ಅದು ಶ್ರಮಿಕರ ಹಕ್ಕು ಎಂದು ಘೋಷಿಸೋಣ

 

ಬೊಮ್ಮ : ಎಲ್ಲಿವರೆಗೂ ಮೀನು ಹಿಡಿಯಲು ಬೇಕಾದ ಸಮಾನ ಅವಕಾಶ ಹಾಗೂ ಅನುಕೂಲ ಮಾಡಿಕೊಡುವುದಿಲ್ಲವೋ ಅಲ್ಲಿವರೆಗೂ ಉಚಿತ ಮೀನು ನಮ್ಮ ಹಕ್ಕು ಎಂದು ಪ್ರತಿಪಾದಿಸೋಣ.

 

ತಿಮ್ಮ : ಲೇ ಯಂಕ, ಬಸ್ವಾ, ಸಣ್ಣೀರ, ಗಂಗಮ್ಮ, ಜೋಗಮ್ಮ ಎಲ್ರೂ ಬನ್ರಿ. ನಾವು ಹೇಳಿದಂಗೆ ಹೇಳಿ.

 

ಬೊಮ್ಮ : ಉಚಿತ ಕೊಡುಗೆಗಳು ಭಿಕ್ಷೆಯಲ್ಲ

 

ಎಲ್ಲರೂ : ನಮ್ಮ ಹಕ್ಕು.

 

ತಿಮ್ಮ : ಮೀನು ಹಿಡಿಯಲು ಸಮಾನ ಅವಕಾಶ ಅನುಕೂಲ ಮಾಡಿ ಕೊಡುವವರೆಗೂ

 

ಎಲ್ಲರೂ : ಉಚಿತ ಯೋಜನೆ ನಮಗೆ ಬೇಕು.

 

ತಿಮ್ಮ : ಸರ್ವರಿಗೂ ಸಮಾನ ಶಿಕ್ಷಣ

 

ಎಲ್ಲರೂ : ಬೇಕೆ ಬೇಕು.

 

ಬೊಮ್ಮ : ಎಲ್ಲರಿಗೂ ಉದ್ಯೋಗ 

 

ಎಲ್ಲರೂ : ಕೊಡಲೇಬೇಕು.

 

ತಿಮ್ಮ : ರೈತರ ಬೆಳೆಗೆ ಬೆಂಬಲ ಬೆಲೆ

 

ಎಲ್ಲರೂ : ಬೇಕೆ ಬೇಕು.

 

ಬೊಮ್ಮ : ಹೊಟ್ಟೆ ತುಂಬಿದವರ ಹೊಟ್ಟೆ ಉರಿಗೆ

 

ಎಲ್ಲರೂ : ಧಿಕ್ಕಾರ.

 

ತಿಮ್ಮ : ಸಂಪನ್ಮೂಲಗಳ ಸಮಾನ ಹಂಚಿಕೆ

 

ಎಲ್ಲರೂ : ಆಗಲೆ ಬೇಕು, ಆಗಲೇ ಬೇಕು.

 

ಬೊಮ್ಮ : ಶ್ರಮಜೀವಿಗಳಿಗೆ ಅವರ ಹಕ್ಕು

 

ಎಲ್ಲರೂ : ದಕ್ಕಲೆ ಬೇಕು, ಸಿಕ್ಕಲೇ ಬೇಕು.

 

ಹಾಡು

 

ನಾವು ಬೆವರನು ಸುರಿಸಿ ದುಡಿಯುವ ಜನ

ನಮ್ಮ ಬೆವರಿನ ಪಾಲನು ಕೇಳುವೆವು

ತುಂಡು ಭೂಮಿಯಲ್ಲ, ಒಂದು ದೇಶವಲ್ಲ

ಇಡಿ ಭೂಗೋಳವನೇ ಕೇಳುವೆವು

 

ಸಾಗರ ಸಾಗರ ಮುತ್ತುಗಳಿವೆ ಇಲ್ಲಿ

ಪರ್ವತ ಪರ್ವತ ವಜ್ರಗಳೋ

ಸಂಪತ್ತೆಲ್ಲಾ ನಮ್ಮದೇ

ಇಡೀ ಭೂಗೋಳವನೇ ಕೇಳುವೆವು

 

- ಶಶಿಕಾಂತ ಯಡಹಳ್ಳಿ

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ