ಮಾಮಾ ಟಿವಿ ಚರ್ಚಾ (ಪ್ರಹಸನ -10)

 ಪ್ರಹಸನ -10

ಮಾಮಾ ಟಿವಿ ಚರ್ಚಾ  

 

( ಮಾಮಾ ಟಿವಿ ಅಂದರೆ ಮಾರಿಕೊಂಡ ಮಾಧ್ಯಮ. ನ್ಯೂಜ್ ಚಾನೆಲ್ ಪ್ಯಾನಲ್ ಚರ್ಚೆ ಕಾರ್ಯಕ್ರಮ )

 

ನಿರೂಪಕ : ಬ್ರೇಕಿಂಗ್ ನ್ಯೂಜ್ ಗಳನ್ನು ಬ್ರೇಕ್ ಮಾಡಲು ಮುಂಚೂಣಿಯಲ್ಲಿರುವ ಮಾಮಾ ನ್ಯೂಜ್ ಚಾನೆಲ್ಲಿಗೆ ಸ್ವಾಗತ. ಇವತ್ತು *"ಕಾಂಗ್ರೆಸ್ ಕಿತ್ತಾಟ. ಗ್ಯಾರಂಟಿ ಸಿಕ್ಕುತ್ತಾ"* ಕುರಿತು ಚರ್ಚೆ ಮಾಡಲು ನಮ್ಮ ಜೊತೆ ಆಯಾ ಪಕ್ಷದ ವಕ್ತಾರರು ಹಾಗೂ ಚಿಂತಕರು ಭಾಗವಹಿಸಿದ್ದಾರೆ ಅವರಿಗೂ ಸ್ವಾಗತ. ಮೊದಲು ಹೂಪಕ್ಷದ ವಕ್ತಾರರಿಗೆ ಮೊದಲ ಪ್ರಶ್ನೆ. ಸರ್.. ಸಿಎಂ ಸ್ಥಾನದ ಕದನಕ್ಕೆ ನಿಮ್ಮ ಅನಿಸಿಕೆ ಏನು

 

ಹೂಪಕ್ಷ : ಇದೆಲ್ಲಾ ಗೊತ್ತಿರುವಂತಹುದೇ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲೆಲ್ಲಾ ಖುರ್ಚಿ ಕದನ ಇದ್ದಿದ್ದೆ. ನಮ್ಮ ಪಕ್ಷ ನೋಡಿ ನಮೋ ಎಳೆದ ಗೆರೆಯನ್ನು ಯಾರೂ ದಾಟೋದೇ ಇಲ್ಲಾ. ಸಿಎಂ ಆಗು ಅಂದವ್ರು ಆಗ್ತಾರೆ, ಮನೆಗೆ ಹೋಗು ಅಂದ್ರೆ ಹೋಗ್ತಾರೆ.

 

ನಿರೂಪಕ : ಯಸ್.. ನೀವು ಹೇಳಿದ್ದು ಸತ್ಯ.. ಇದಕ್ಕೆ ಕೈಪಕ್ಷದ ವಕ್ತಾರರು ಏನು ಹೇಳ್ತಾರೆ.

 

ಕೈಪಕ್ಷ : ನಮ್ಮದು ಸರ್ವಾಧಿಕಾರಿ ಪಕ್ಷ ಅಲ್ಲಾ.. ಪ್ರಜಾಸತ್ತಾತ್ಮಕ ಪಕ್ಷ. ಸಿಎಂ ಆಯ್ಕೆಗೆ ಶಾಸಕರ ಅಭಿಪ್ರಾಯ, ವೀಕ್ಷಕರ ವರದಿ, ಹೈಕಮಾಂಡ್ ಅನಿಸಿಕೆ ಎಲ್ಲಾ ಆಧರಿಸಿ ಆಯ್ಕೆ ಮಾಡಲಾಗುತ್ತೆ.

 

ಹೂಪಕ್ಷ : ಅದಕ್ಕೆ ನಾಲ್ಕೈದು ದಿನ ಬೇಕೇನ್ರಿ. ನಿಮ್ಮ ಖುರ್ಚಿ ಕಿತ್ತಾಟ ನೋಡಿ ಜನ ಯಾಕಾದರೂ ಇವರಿಗೆ ಓಟ್ ಹಾಕಿದ್ವೋ ಅಂತಾ ಬೈಕೋತಿದ್ದಾರೆ.

 

ಕೈಪಕ್ಷ : ಹೌದಾ.. ಬೈಕೋತಿರೋರು ಜನರಾ ಇಲ್ಲಾ ಮಾಮಾಗಳ.

 

ಹೂಪಕ್ಷ : ನಾವೇನು ಮಾಮಾಗಳೇನ್ರಿ. ಬಾಯಿ ಬಿಗಿಯಾಗಿರ್ಲಿ.

 

ಕೈಪಕ್ಷ : ಅದಕ್ಕ್ಯಾಕೆ ಹೆಗಲು ಮುಟ್ಕೊಂಡು ನೋಡ್ತೀರಿ. ಮಾಮಾ ಅಂದ್ರೆ ನೀವು ಸಾಕಿಕೊಂಡಿರೋ ಮಾರಿಕೊಂಡ ಮಾಧ್ಯಮಗಳು ಅಂತಾ

 

ನಿರೂಪಕ : ನೋ ನೊ ನೋ.. ನಾವೇನೂ ಮಾರಿಕೊಂಡಿಲ್ಲ, ಇದ್ದದ್ದನ್ನ ಇದ್ದಂಗೆ ತೋರಿಸ್ತೀವಿ..

 

ಚಿಂತಕ : ನೀವೂ ಯಾಕ್ರಿ ಹೆಗಲು ಮುಟ್ಕೊಂಡು ಮಾತಾಡ್ತೀರಿ. ಅವರು ಮಾತಾಡ್ಲಿ ಬಿಡಿ.

 

ಕೈಪಕ್ಷ : ನೀವು ಯುಪಿ ಯಲ್ಲಿ ಯೋಗಿ ಸಿಎಂ ಘೋಷಣೆ ಮಾಡೋದಿಕ್ಕೆ 8 ದಿನ ತಗೊಂಡ್ರಿ. ಆಸ್ಸಾಂನಲ್ಲಿ ಒಂಬತ್ತು ದಿನ. ಇನ್ನೂ ಎಲ್ಲೆಲ್ಲಿ ಎಷ್ಟೆಷ್ಟು ದಿನ ಅಂತಾ ಹೇಳಲಾ..

 

ನಿರೂಪಕ : ಅದೆಲ್ಲಾ ಆಯಾ ರಾಜ್ಯದ ಸನ್ನಿವೇಶಗಳ ಮೇಲೆ ಡಿಪೆಂಡ್ ಆಗಿರುತ್ತೆ ಅಲ್ವಾ..

 

ಹೂಪಕ್ಷ : ಹೌದೌದು ಆಗಿರುತ್ತೆ..

 

ಕೈಪಕ್ಷ : ಈಗಲೂ ಹಂಗೇನೇ.. ಸಂದರ್ಭ ಸನ್ನಿವೇಶ ಆಧರಿಸಿ ನಿರ್ಧರಿಸೋಕೆ ನಾಲ್ಕಾರು ದಿನ ಆಗುತ್ತೆ.. ನಿಮಗೆ ಕಾಯೋಕೇನು  ರೋಗ..

 

ನಿರೂಪಕ : ಯಾಕ್ರಿ ಖುರ್ಚಿಗಾಗಿ ಹೀಗೆ ಅಸಹ್ಯವಾಗಿ, ಜನರಿಗೆ ಬೇಸರ ಆಗೋಹಾಗೆ ಬಹಿರಂಗವಾಗಿ ಕಿತ್ತಾಡಬೇಕು

 

ಚಿಂತಕ : ಇದನ್ನೆಲ್ಲಾ ಸೃಷ್ಟಿ ಮಾಡೋರು ಮಾಮಾ ಚಾನೆಲ್ಗಳೇ ಹೊರತು ಬೇರೆ ಯಾರೂ ಅಲ್ಲಾ. ಯಾವ ರಾಜ್ಯದಲ್ಲಿ ಖುರ್ಚಿ ಕಾದಾಟ ಇಲ್ಲಾ ಹೇಳ್ರಿ. ಎಲ್ಲಿ ಪೈಪೋಟಿ ಇರುತ್ತೋ ಅಲ್ಲಿ ಡೆಮಾಕ್ರಸಿ ಉಳಿಯುತ್ತೆ. ಪೈಪೋಟಿಗೂ ಅವಕಾಶ ಇಲ್ಲದೆ ಎಲ್ಲಿ ಬರೀ ಏಕಪಕ್ಷೀಯ ಹೇರಿಕೆ ಆಗುತ್ತೋ ಅಲ್ಲಿ ಡಿಕ್ಟೇರಶಿಪ್ ಇರುತ್ತೆ. ಅರ್ಥ ಆಯ್ತಾ.

 

ನಿರೂಪಕ : ಅರ್ಥ ಅನರ್ಥ ವ್ಯರ್ಥ ಸ್ವಾರ್ಥ ಇವೇ ಅಲ್ವಾ ಸರ್ ರಾಜಕೀಯಾ

 

ಚಿಂತಕ : ಅಂತಹುದಕ್ಕೆಲ್ಲಾ ಬೆಂಬಲಿಸುವ ಮಾಮಾ ಚಾನೆಲ್ಗಳದ್ದೇನು ಕಥೆ. ರಾಜಕೀಯದವರನ್ನ ಕ್ಷಮಿಸಬಹುದು ತಂದಾಕಿ ತಮಾಷೆ ನೊಡೋ ಮಾಮಾ ಗಳವರನ್ನ ಹೇಗ್ರಿ ಸಹಿಸ್ಗೊಳ್ಳೊದು.

 

ನಿರೂಪಕ : ಅದು ಹಾಗಲ್ಲ.. ವಿಷಯಾಂತರ ಮಾಡೋದು ಬೇಡ. ಗ್ಯಾರಂಟಿಗಳ ಆಸೆ ತೋರಿಸಿ ಬಹುಮತ ಪಡೆದ ಕೈಪಕ್ಷ ಅವುಗಳನ್ನ ಈಡೇರಿಸಲು ಸಾಧ್ಯವಾ ಅಂತಾ ಜನಾ ಕೇಳ್ತಿದ್ದಾರೆ..

 

ಹೂಪಕ್ಷ : ಹಾಗೆ ಕೇಳಿ ಮತ್ತೆ. ಹಳ್ಳಿ ಜನ ಕರೆಂಟ್ ಬಿಲ್ ಕಟ್ಟೋದಿಲ್ಲ ಸಿದ್ದಣ್ಣನೇ ಕಟ್ಟಲಿ ಅಂತಿದ್ದಾರೆ

 

ಕೈಪಕ್ಷ : ಹೌದಾ.. ಜನರ ಹೆಸರು ನಿಮ್ಮ ಉಸಿರಾ? ರೀ ಸ್ವಾಮಿ ಒಂಬತ್ ವರ್ಷ ಆಯ್ತು ತೊಂಬತ್ತು ದಿನದೊಳಗೆ ಕಪ್ಪು ಹಣ ತಂದು ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ಹಾಕ್ತೀನಿ ಅಂತಾ ನಿಮ್ಮ ವಿಶ್ವಗುರು ಭರವಸೆ ಕೊಟ್ಟುಹಾಕಿದ್ರಾ

 

ಹೂಪಕ್ಷ : ಅದು  ಅದು..

 

ನಿರೂಪಕ : ಎಲ್ಲಾ ಬ್ಲಾಕ್ಮನಿ ಇನ್ನೂ ವಸೂಲಾಗಿಲ್ಲಾ. ಬಂದ ತಕ್ಷಣ ಹಾಕ್ತಾರೆ ಬಿಡ್ರಿ..

 

ಚಿಂತಕ : ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂತಾ ಇಸ್ವಗುರು ಪ್ರವಚನ ಕೊಟ್ಟಿದ್ರಲ್ಲಾ ಎರಡು ಲಕ್ಷಾನಾದ್ರೂ ಉದ್ಯೋಗ ಕೊಟ್ರಾ

 

ಹೂಪಕ್ಷ : ಅದೇನಪಾಂದ್ರೆ..

 

ನಿರೂಪಕ : ಕೊಡ್ತಾ ಇದ್ರು.. ಆದರೆ ಏನು ಮಾಡೋದು ಕರೊನಾ ಮಾರಿ ಬಂದು ಎಲ್ಲಾ ಎಡವಟ್ಟು ಮಾಡ್ತು..

 

ಚಿಂತಕ : ರ್ರೀ ಆಂಕರ್ ಸಾಹೇಬ್ರೆ ಅವರು ಹೇಳಬೇಕಾದ ಉತ್ತರಗಳನ್ನ ನೀವ್ಯಾಕೆ ಹೇಳ್ತೀರಿ? ಎಷ್ಟಕ್ಕೆ ಮಾರ್ಕೊಂಡಿದ್ದೀರಿ.

 

ನಿರೂಪಕ : ( ಕಕ್ಕಾಬಿಕ್ಕಿಯಾಗಿ) ನೋ ನೋ ನೋ ಇಂತಹ ಆರೋಪ ನಮ್ಮ ಮಾಮಾ ಚಾನೆಲ್ ಒಪ್ಪೋದಿಲ್ಲ ಸರ್. ಅವರು ಹೇಳೋಕಾಗದ್ದನ್ನ ನಾನು ಹೇಳಿದೆ ಅಷ್ಟೇ.

 

ಕೈಪಕ್ಷ : ಹೋಗಲಿ ರೈತರ ಆದಾಯ ಡಬಲ್ ಮಾಡ್ತೀನಿ ಅಂತಾನೂ ಭರವಸೆ ಕೊಟ್ಟಿದ್ರಲ್ಲಾ ಚೌಕೀದಾರರು ಏನಾಯ್ತು?

 

ಹೂಪಕ್ಷ : ರೈತರ ಅಕೌಂಟಿಗೆ ಹಣ ಹಾಕಿದ್ದಾರಲ್ವಾ ಅದಕ್ಕಿಂತಾ ಇನ್ನೇನು ಬೇಕ್ರಿ.

 

ಕೈಪಕ್ಷ : ನಾವು ಕೇಳಿದ್ದು ರೈತರ ಮೂಗಿಗೆ ತುಪ್ಪಾ ಹಚ್ಚಿದ್ದನಲ್ಲಾ ಎಲ್ಲಿ ಆದಾಯ ಡಬಲ್ ಆಯ್ತು ಹೇಳ್ರಿ

 

ನಿರೂಪಕ : ಅದೇನಪಾಂತಂದ್ರೆ.. ಹೋಗ್ಲಿ ಬಿಡಿ, ಹಿಂದಿನದ್ದೆಲ್ಲಾ ಈಗ್ಯಾಕೆ? ಅದೆಲ್ಲಾ ತಗದ್ರೆ ವಿಷಯಾಂತರ ಆಗುತ್ತೆಈವಾಗಿನ ಸುದ್ದಿ ಮಾತಾಡಿ. ಗ್ಯಾರಂಟಿಗಳ ಗತಿ ಏನು?

 

ಚಿಂತಕ : ಕೊಟ್ಟ ಭರವಸೆಗಳನ್ನ ಈಡೇರಿಸಿಲ್ಲಾ ಅಂತಾ ಹೂಪಕ್ಷದವರು ಮೊದಲು ಒಪ್ಪಿಕೊಳ್ಳಲಿ. ಕೈಪಕ್ಷದವರು ಇನ್ನೂ ಅಧಿಕಾರಕ್ಕೆ ಬಂದಿಲ್ಲ, ಸಿಎಂ ಆಯ್ಕೆ ಆಗಿಲ್ಲ. ಪ್ರಮಾಣವಚನ ಸ್ವೀಕರಿಸಿಲ್ಲ. ಗ್ಯಾರಂಟಿ ಕೊಡ್ತಾರೋ ಬಿಡ್ತಾರೋ ಈಗಲೇ ಹೇಳೋಕಾಗೋದಿಲ್ಲ. ಆದರೂ ಗ್ಯಾರಂಟಿ ಬಗ್ಗೆ ನಾಲಿಗೆಗೆ ಗೋರಂಟಿ ಬಳಕೊಂಡು ಬಾಯಿ ಯಾಕ್ರಿ ಬಡಕೋತೀರಾ

 

ಕೈಪಕ್ಷ : ಕೊಡ್ತೀವಿ ಅಂದದ್ದನ್ನ ಕೊಟ್ಟೇ ಕೊಡ್ತೀವಿ. ತಡ್ಕೊಳ್ರಿ.. ಯಾಕಿಂಗೆ ಆರು ತಿಂಗಳಿಗೆ ಹುಟ್ಟಿದವರಂಗೆ ಆತುರ ಪಡ್ತೀರಿ

 

ಹೂಪಕ್ಷ : ಅದೇ ಯಾವಾಗ್ ಕೊಡ್ತೀರಾ? ಹೆಂಗೆ ಕೊಡ್ತೀರಾ? ಎಲ್ಲಿಂದ ಕೊಡ್ತೀರಾ

 

ಕೈಪಕ್ಷ : ನೀವು ಹೆಂಗೆಂಗೆ ಕೊಟ್ರೋ ಹಂಗಂಗೆ ನಾವೂ ಕೊಡ್ತೀವಿ ಸುಮ್ಕಿರ್ರಿ..

 

ಚಿಂತಕ : ಅವರು ಕೊಟ್ಡ ಭರವಸೆ ಈಡೇರಿಸಲಿಲ್ಲಾ ಅಂತಾ ನೀವು ಹಂಗೇನಾ

 

ಕೈಪಕ್ಷ : ಎಲ್ಲದಕ್ಕೂ ಸಮಯ ಬೇಕು. ಅದಕ್ಕಾಗಿ ಕಾಯಬೇಕು. ತಾಳ್ಮೆ ಇರಬೇಕು. ಕೊಡ್ತೀವಿ ಇರಿ, ಒಂದೊಂದಾಗಿ ಎಲ್ಲಾ ಗ್ಯಾರಂಟಿ ಈಡೇರಿಸ್ತೀವಿ.

 

ನಿರೂಪಕ : ಅದೇ ಯಾವಾಗ. ಮೊದಲ ಸಂಪುಟ ಸಭೆಯಲ್ಲೇ ಗ್ಯಾರಂಟಿಗಳ ಘೋಷಣೆ ಮಾಡೋ ಗ್ಯಾರಂಟಿ ಕೊಟ್ಟಿದ್ರಲ್ವಾ.

 

ಕೈಪಕ್ಷ : ಅದೇ ಸಭೆನಾದ್ರೂ ಆಗ್ಲಿ ಇರ್ರಿ. ಇನ್ನೂ ಪ್ರಮಾಣವಚನ ಕಾರ್ಯಕ್ರಮಾನೇ ಆಗಿಲ್ಲಾ ಬಂದು ಬಿಟ್ರು ಗ್ಯಾರಂಟಿ ಕೇಳೋಕೆ.

 

ನಿರೂಪಕ : ತಗೊಳ್ಳಿ ಸ್ವಾಮಿ ಸಮಯ ತಗೊಳ್ಳಿ. ಗ್ಯಾರಂಟಿ ಜೊತೆಗೆ ಯಾವ್ಯಾವ ಕಂಡೀಶನ್ ಅಪ್ಲೈ ಅಂತಾ ಯೋಚನೆ ಮಾಡೋಕು ನಿಮಗೆ ಟೈಂ ಬೇಕಲ್ವಾ..

 

ಕೈಪಕ್ಷ : ಅದನ್ನ ನಮ್ಮ ನಾಯಕರು ಡಿಸೈಡ್ ಮಾಡ್ತಾರೆ. ಎಲ್ಲರಿಗೂ ಕೊಡೋದಾ ಇಲ್ಲಾ ತೆರಿಗೆ ಕಟ್ಟದೇ ಇರೋರಿಗೆ ಮಾತ್ರಾ ಗ್ಯಾರಂಟಿ ಕೊಡೋದಾ ಅನ್ನೋದು ಸರಕಾರದ ಬಜೆಟ್ ಮೇಲೆ ಅವಲಂಬನೆ ಆಗಿರುತ್ತದೆ.

 

ಹೂಪಕ್ಷ : ನಮಗೆ ಮೊದಲೇ ಗೊತ್ತಿತ್ತು. ಇವರು ಹೇಳೋದು ಒಂದು ಮಾಡೋದು ಇನ್ನೊಂದು ಅಂತಾ. ಈಗ ನೋಡಿ ದೊಡ್ಡದಾಗಿ ಹೇಳಿಕೆ ಕೊಟ್ಟು ಕೆಳಗೆ ಚಿಕ್ಕದಾಗಿ ಸ್ಟಾರ್ ಹಾಕಿ ಕಂಡೀಶನ್ ಅಪ್ಲೈ ಅಂತಾ ಜಾಹೀರಾತುಗಳಲ್ಲಿ ಹೇಳ್ತಾರಲ್ಲಾ ಹಂಗೇನೇ ಇವರದ್ದೂ. ಮೋಸ, ಮಹಾಮೋಸ, ವಂಚನೆ, ನಂಬಿಕೆದ್ರೋಹಮಹಾಜನರೇ ಇವರ ಮಾತು ನಂಬಬೇಡಿ.. ಗ್ಯಾರಂಟಿ ವಾರಂಟಿ ಎಲ್ಲಾ ಬೋಗಸ್ಸು..

 

ಚಿಂತಕ : ರ್ರೀ ಹೂಪಕ್ಷದವರೆ.. ನೀವು ಈಗ ಹೇಳಿದ ಮಾತು ನಿಮ್ಮ ಪಕ್ಷ ಈಡೇರಿಸದೇ ಇರುವ ಭರವಸೆಗಳಿಗೂ ಅಪ್ಲೈ ಅಗುತ್ತಾ ಇಲ್ಲಾ ಬೇರೆ ಪಕ್ಷಕ್ಕೆ ಮಾತ್ರಾನಾ? ನೀವೂ ಮೋಸ ವಂಚನೆ ನಂಬಿಕೆದ್ರೋಹ ಮಾಡಿದ್ರಿ ಅಂತಾ ಒಪ್ಪಿಕೊಳ್ತೀರಾ?

 

ಹೂಪಕ್ಷ : ಥೋ ಥೋ ಎಲ್ಲಿ ಹೋದ್ರು ನಮ್ಮ ಬುಡಕ್ಕೆ ಕೈಹಾಕೋಕೆ ಬರ್ತಿರಲ್ರಿ.. ನಮ್ಮದು ಬಿಡಿ, ನಿಮ್ಮದು ಹೇಳಿ..

 

ಚಿಂತಕ : ಇದು ತಪ್ಪು. ನಿಮ್ಮ ಒಂದು ಇಂಜಿನ್ ಫೇಲಾದರೇನು ಇನ್ನೊಂದು ಇಂಜೀನ್ ಚಾಲ್ತಿಯಲ್ಲಿದೆಯಲ್ವಾ. ಇನ್ನೂ ಹೊಸ ಸರಕಾರ ಬಂದಿಲ್ಲ. ಕೂಸು ಹುಟ್ಟೋಕು ಮುಂಚೆ ಕೂಸಿನ ಐಬು ಯಾಕ್ರಿ ಹುಡುಕ್ತೀರಾ

 

ಹೂಪಕ್ಷ : ನನಗೆ ಗೊತ್ತಿಲ್ವಾ.. ನೀವು ಚಿಂತಕರೆಲ್ಲಾ ನಗರ ನಕ್ಸಲರು. ಯಾವಾಗ್ಲೂ ದೇಶದ್ರೋಹಿ ಪಕ್ಷದ ಪರ ಇದ್ದೋರು. ನೀವೆಲ್ಲಾ ಪಾಕಿಸ್ತಾನಿ ಬೆಂಬಲಿಗರು, ಧರ್ಮದ್ರೋಹಿಗಳು.. ನಿಮ್ಮನ್ನೆಲ್ಲಾ ದೇಶದ ಜನತೆ ಎಂದೂ ಕ್ಷಮಿಸೋದಿಲ್ಲ. ಕೈಪಕ್ಷಕ್ಕೆ ಧಿಕ್ಕಾರ, ನಗರ ನಕ್ಸಲರಿಗೆ ಧಿಕ್ಕಾರ..

( ಎಂದು ಘೋಷಣೆ ಕೂಗುತ್ತಾ ಮೈಕ್ ಬಿಸಾಕಿ ಎದ್ದು ಹೂಪಕ್ಷದ ವಕ್ತಾರ ಎದ್ದು ಹೋಗುತ್ತಾನೆ)

 

ನಿರೂಪಕ : ಕ್ಷಮಿಸಿ ಇಂತಹದ್ದು ಆಗಬಾರದಿತ್ತು ಆಯ್ತು. ಕೊನೆಯದಾಗಿ ಕೈಪಕ್ಷದ ವಕ್ತಾರರು ಏನು ಹೇಳುತ್ತೀರಿ

 

ಕೈಪಕ್ಷ : ಹೇಳೋದಿಕ್ಕೆ ಏನಿದೆ. ಹಿಂದೆ ಜನ ಅಧಿಕಾರ ಕೊಟ್ಟಾಗ ಐದು ವರ್ಷಗಳ ಕಾಲ ಸಮರ್ಥ ಜನಪರ ಆಡಳಿತವನ್ನು ನಮ್ಮ ಪಕ್ಷ ರಾಜ್ಯದಲ್ಲಿ ಮಾಡಿ ತೋರಿಸಿದೆ. ಸಲವೂ ಜನರ ನಂಬಿಕೆ ಉಳಿಸಿಕೊಂಡು ಆಡಳಿತ ಮಾಡ್ತೇವೆ ಅನ್ನೋ ಗ್ಯಾರಂಟಿ ಕೊಡ್ತೇವೆ.

 

ನಿರೂಪಕ : ಧನ್ಯವಾದಗಳು. ನೀವು ಚಿಂತಕರು, ಕೊನೆಯದಾಗಿ ಏನು ಹೇಳ್ತೀರಿ.

 

ಚಿಂತಕ : ಯಾವಾಗ ವಾದದಲ್ಲಿ ಸೋಲ್ತೀವಿ ಅಂತಾ ಗೊತ್ತಾಗುತ್ತದೋ ಆಗ ಇದೇ ರೀತಿ ಇವರು ಗಲಾಟೆ ಎಬ್ಬಿಸಿ, ಸುಳ್ಳು ಆರೋಪ ಮಾಡಿ ವಿಷಯಾಂತರ ಮಾಡ್ತಾರೆ ಇಲ್ಲಾ ಪಲಾಯಣಮಾಡ್ತಾರೆ. ಹೂಪಕ್ಷದವರ ಹಣೆಬರವೇ ಇಷ್ಟು..

 

ನಿರೂಪಕ : ಧನ್ಯವಾದಗಳು. ನೋಡಿದ್ರಾ ವೀಕ್ಷಕರೇ.. ಇವತ್ತಿನ ವಿಶೇಷ ಚರ್ಚಾ ಕಾರ್ಯಕ್ರಮ ಇಲ್ಲಿಗೆ ಮುಕ್ತಾಯವಾಗುತ್ತದೆಇನ್ನು ಮುಂದೆ ನೋಡಿ ಮತ್ತೊಂದು ವಿಶೇಷ ಪ್ರೊಗ್ರಾಂ.. ಸಿದ್ದೂನಾ ಇಲ್ಲಾ ಡೀಕೇನಾ.. ? ಯಾವಾಗಲೂ ಮಾಮಾ ನ್ಯೂಜ್ ಚಾನೆಲ್ ನೋಡ್ತಾ ಇರಿ. ಎಲ್ಲದರಲ್ಲೂ ನಾವೇ ಫಸ್ಟ್.. ಎಲ್ಲದರಲ್ಲೂ ನಾವೇ ಫಾಸ್ಟ್.

 

*- ಶಶಿಕಾಂತ ಯಡಹಳ್ಳಿ.*

 

(2023, ಮೇ 10 ರಂದು ನಡೆದ ಚುನಾವಣೆಯ ನಂತರದಲ್ಲಿ ಮಾರಿಕೊಂಡ ಮಾಧ್ಯಮಗಳ ಚರ್ಚಾ ಕಾರ್ಯಕ್ರದ ಕುರಿತು ಬರೆದ ರಾಜಕೀಯ ವಿಡಂಬನಾತ್ಮಕ ಪ್ರಹಸನವಿದು.)

 

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ