ಕಾರಿಯಪ್ಪನ ಉರಿನಂಜು (ಪ್ರಹಸನ-11)

 

ಪ್ರಹಸನ -11

ಕಾರಿಯಪ್ಪನ ಉರಿನಂಜು 

 

( ತನ್ನ ಕತರ್ನಾಕ್ ಕಂತ್ರಿ ಕನಸುಗಳು ಯಾವವೂ ನನಸಾಗದ ಬೇಸರದಲ್ಲಿ ಸರಕಾರಿ ನಾಟಕ ಕಂಪನಿಗೆ ರಾಜೀನಾಮೆ ಇತ್ತ ಕಾರಿಯಪ್ಪನವರು ಹೆಗಲ ಮೇಲೆ  ಮತಾಂಧತೆಯ ಗಂಟು ಹೊತ್ತು ವಟಗುಟ್ಟುತ್ತಾ ಏಕಾಂಗಿಯಾಗಿ ನಡೆದು ಹೋಗುತ್ತಿದ್ದಾರೆ)

 

ಕಾರಿಯಪ್ಪ : (ಸ್ವಗತದಲ್ಲಿ) ಚೆಚೆಛೇ ಚೇ ಛೇ.. ಥು  ತು ಥೂ.. ಅವಮಾನ.. ಅತೀ ಅಪಮಾನ ಎಂಥಾ ಬಂಡ ಬಾಳು ನಂದು. ಹಾಕಿಕೊಂಡ ಪ್ಲಾನ್ ಗಳೆಲ್ಲಾ ಉಲ್ಟಾ ಆದುವಲ್ಲಾ. ಎಷ್ಟೇ ಉರಿದು ಮೆರೆದರೂ ಬಂದ ದಾರಿಗೆ ಸುಂಕ ಇಲ್ಲದಂತೆ ಒಂಟಿಯಾಗಿ ವಾಪಸ್ ಊರಿಗೆ ಹೋಗಬೇಕಾಗಿದೆಯಲ್ಲಾ. ಅಯ್ಯೋ ವಿಧಿಯೇ.. ನೀನಿಷ್ಟು ನಿರ್ಧಯಿಯೇ..

 

( ಅಷ್ಟರಲ್ಲಿ ಪಕ್ಕದಲ್ಲಿ ಹೊರಟವನ ಮೊಬೈಲ್ ನಿಂದ " ಏನೋ ಮಾಡಲು ಹೋಗಿ ಏನು ಮಾಡಿದೆ ನೀನು" ಹಾಡು.. ಕೇಳಿ ಕೆರಳಿ ನಿಂತು )

 

ಕಾರಿಯಪ್ಪ : ಯಾರ್ರಿ ಅದು.. ಮೊದಲು ಆಪ್ ಮಾಡ್ರಿ.. 

 

ವ್ಯಕ್ತಿ : ಯೋ.. ಯಾಕಯ್ಯಾ.. ಮೊಬೈಲ್ ನಂದು, ಕೇಳುವ ಕಿವಿ ನಂದು. ನಡುವೆ ನಿಂದೇನಯ್ಯಾ. ನಿನ್ನ ದೌಲತ್ತು ನಿನ್ನತ್ರಾನೇ ಇಟ್ಕೋ.. ಜಾಸ್ತಿ ಎಗರಾಡಿದ್ರೆ ಹೊಗೆ ಹಾಕಿಸ್ಕೋತೀಯಾ  

(ಎಂದು ತಿರುಗಿ ಬಿದ್ದ ವ್ಯಕ್ತಿ ಕಲ್ಲೆತ್ತಿ ಬಿಸಾಕಿ ಮುಂದೆ ಸಾಗುತ್ತಾನೆ)

 

ಕಾರಿಯಪ್ಪ : ಹೂಂ ಬಿಸಾಕಣ್ಣಾ ಬಿಸಾಕು, ಗೂಳಿ ಬಿದ್ದಾಗ ಆಳಿಗೊಂದು ಕಲ್ಲಂತೆ.. ನೀನೂ ಒಂದು ಕಲ್ಲು ಬಿಸಾಡಪ್ಪಾ. ಏನೋ ಮಾಡಲು ಹೋಗಿ... ಛೇ ಥೂ ನನ್ನ ಬಾಯಲ್ಲೂ ದರಿದ್ರದ ಹಾಡು.. ಸಾವರ್ಕರೇಶ್ವರಾ ನನ್ನೊಬ್ಬನ್ನೇ ಕಾಪಾಡಪ್ಪಾ.. 

 

( ಅಷ್ಟರಲ್ಲಿ ಹಿಂದಿನಿಂದ ಯಾರೋ ಸ್ವಲ್ಪ  ನಿಲ್ಲಿ  ಎಂದು ಕರೆದಂತಾಗುತ್ತದೆ. ತಿರುಗಿ ನೋಡಿದರೆ ಒಂದು ಕೈಯಲ್ಲಿ ಉರಿಯುವ ಪಂಜು ಇನ್ನೊಂದು ಕೈಯಲ್ಲಿ ಕತ್ತಿ ಹಿಡಿದ ಅಜಾನುಭಾವ  ವ್ಯಕ್ತಿ  ಹಾಗೂ ವಿಷದ ಬಾಟಲು ಹಾಗೂ ಕತ್ತಿ ಹಿಡಿದ ಇನ್ನೊಬ್ಬ ದೈತ್ಯಾಕಾರದ ವ್ಯಕ್ತಿ ತನ್ನತ್ತಲೇ ಓಡಿ ಬರುತ್ತಿದ್ದಾರೆ. ಹೆದರಿಕೊಂಡ ಕಾರಿಯಪ್ಪ ಓಡತೊಡಗುತ್ತಾನೆ. ಎರಡೂ ದೈತ್ಯ ಜೀವಿಗಳೂ ಬೆನ್ನಟ್ಟುತ್ತವೆ. ಒಂದೆರಡು ರೌಂಡು ಓಡಿ ಕಾರಿಯಪ್ಪ ಸುಸ್ತಾಗಿ ನಿಂತಾಗ ಇಬ್ಬರೂ ಅಕ್ಕಪಕ್ಕ ಬಂದು ಕಾರಿಯಪ್ಪನ ತೋಳುಗಳನ್ನು ಹಿಡಿದು ಮೇಲೆತ್ತುತ್ತಾರೆ

 

ಕಾರಿಯಪ್ಪ : ( ಭಯಗೊಂಡು) ಅಯ್ಯೋ ಅಯ್ಯಯ್ಯಯ್ಯೊ.. ದಯವಿಟ್ಟು ನನ್ನ ಬಿಟ್ಟುಬಿಡಿ. ಬದುಕಿದ್ದರೆ ನಾಟಕ ಮಾಡಿಕೊಂಡು ಬದುಕ್ತೇನೆ. ನಿಮ್ಮ ದಮ್ಮಯ್ಯಾ.. ( ಅಂತಾ ಗೋಗರೆಯುತ್ತಾನೆ

 

ಉರಿಗೌಡ : ಹೆದರಬೇಡಿ ತಂದೆ.. ನಾವು ನೀವೇ ಹುಟ್ಟಿಸಿದ ಸಂತಾನ. ನಾನು ಉರಿಗೌಡ..

 

ನಂಜೇಗೌಡ : ನಾನು ನಂಜೇಗೌಡ.. ( ಎಂದು ಕೆಳಕ್ಕೆ ಬಿಸಾಕುತ್ತಾರೆ

 

ಕಾರಿಯಪ್ಪ : (ಸಾವರಿಸಿಕೊಂಡು ಎದ್ದು ನಿಂತು ) ನೀವಾ.? ಅಲ್ಲೇ ಹುಟ್ಟಿಸಿ ಅಲ್ಲೇ ಬಿಟ್ಟು ಬಂದಿದ್ದೆನಲ್ಲಾ. ಮತ್ಯಾಕ್ರೋ ನನ್ನ ಹಿಂದಿಂದೆ  ಬಂದ್ರಿ, ನನ್ನ ಪ್ರಾಣ ತಿನ್ನೋದಕ್ಕೆ.

 

ಉರಿಗೌಡ : ಹುಟ್ಟಿಸಿದವನನ್ನು ಬಿಟ್ಟು ಮತ್ತೆಲ್ಲಿಗೆ ಹೋಗಬೇಕು ತಂದೆ.

 

ನಂಜೇಗೌಡ : ನೀವೆಲ್ಲೋ ನಾವೂ ಅಲ್ಲೆ. ನೀವು ಮುಂದೆ ಮುಂದೆ.. ನಾವು ನಿಮ್ಮ ಹಿಂದೆ ಹಿಂದೆ

 

ಕಾರಿಯಪ್ಪ : ಥೋ.. ನಿಮ್ಮ ಕೈಯಿಂದ ಟಿಪ್ಪುನನ್ನ ಸಾಯಿಸಬೇಕಿತ್ತು ಅದಕ್ಕೆ ನಿಮ್ಮನ್ನ ಸೃಷ್ಟಿ ಮಾಡಿದ್ದೆ ಅಷ್ಟೇ..

 

ಉರಿಗೌಡ : ಹೌದಾ ತಂದೆ. ಟಿಪ್ಪು ಯಾರು? ಎಲ್ಲಿದ್ದಾರೆ ಹೇಳಿ. ಈಗಲೇ ಹೋಗಿ ಕೊಂದು  ನಿಮ್ಮ ಮುಂದೆ ಹೆಣ ತಂದು ಹಾಕುತ್ತೇವೆ

 

ಕಾರಿಯಪ್ಪ : ಅಯ್ಯೋ ಈಗ ಇಲ್ಲದ ಟಿಪ್ಪೂನ ಎಲ್ಲಿಂದಾ ತರಲಿ.. ನೋಡ್ರಪ್ಪಾ ಕಂದಮ್ಮಗಳಾ ಇನ್ನೂರು ವರ್ಷಗಳ ಹಿಂದೆ  ಟಿಪ್ಪು ಸುಲ್ತಾನ ಅಂತಾ ಒಬ್ಬ  ಮುಸ್ಲಿಂ ಮತಾಂಧ ರಾಜ ಇದ್ದ. ನನ್ನ ತಾತನ ತಾತನನ್ನ ಮುಸ್ಲಿಂ ಆಗಿ ಬಲವಂತದಿಂದ ಮತಾಂತರ ಮಾಡಿದ್ದಾ. ಯುದ್ದದಲ್ಲಿ ಸತ್ತಾ. ಅವನ ಮೇಲೆ ಸೇಡು ತೀರಿಸಿಕೊಳ್ಳೋದಿಕ್ಕೆ ಕಾಯ್ತಾ ಇದ್ದೆ. ಅದಕ್ಕಾಗಿ ನಾನು ನಿಮ್ಮಿಬ್ಬರನ್ನ  ಹುಟ್ಟಿಸಿ ನಿಮ್ಮಿಂದಲೇ ಟಿಪ್ಪು ಹತ್ಯೆ ಆಯ್ತು ಅಂತಾ ಎಲ್ಲರೂ ನಂಬುವಂತೆ ಮಾಡಿದ್ದೆ

 

ನಂಜೇಗೌಡ : ಅಂದ್ರೆ  ಟಿಪ್ಪು ಕೊಲ್ಲೋದಕ್ಕೆ ನಮಗೆ ಸುಪಾರಿ ಕೊಟ್ಟಿದ್ರಾ ತಂದೆ

 

ಕಾರಿಯಪ್ಪ : ಹೌದ್ರಯ್ತಾ.. ಗೌಡ ಕುಲದ ವೀರಾಧಿ ವೀರರು ನೀವು ಅಂತಾ ತೋರಿಸಬೇಕಿತ್ತು. ಟಿಪ್ಪು ವಿರುದ್ದ ಗೌಡ ಸಮುದಾಯವನ್ನ ಎತ್ತಿಕಟ್ಟಬೇಕಿತ್ತು, ಟಿಪ್ಪು ವಿರೋಧಿಯಾದ ಸಂಘ ಪರಿವಾರದ ಗಮನವನ್ನು ನನ್ನ ಕಡೆಗೆ ಸೆಳೆಯಬೇಕಿತ್ತು. ಅದಕ್ಕೆ ನಿಮಗೆ ಜನ್ಮ ಕೊಟ್ಟಿದ್ದೆ.

 

ನಂಜೇಗೌಡ : ಆಹಾ ರುದ್ರ.. ಅತಳ ವಿತಳ ಪಾತಾಳ ರಸಾತಳ ಎಲ್ಲಿಯೇ ನಿಮ್ಮ ಟಿಪ್ಪು ಅಡಗಿರಲಿ.. ಅಲ್ಲಿಗೆ ಹೋಗಿ ನನ್ನ ನಂಜು ಕುಡಿಸಿ, ಇವನ ಉರಿ ತಾಗಿಸಿ ಕೊಂದು ಬರುತ್ತೇವೆ. ನೀವು ಆಜ್ಞೆ ಮಾಡಿ ತಂದೆ, ಕೊಲ್ಲುವುದೇ ನಮ್ಮ ದಂದೆ.

 

ಕಾರಿಯಪ್ಪ : ಯೋ ಈಗಾಗಲೇ ಟಿಪ್ಪು ಸತ್ತು ಇತಿಹಾಸ ಆಗಿದ್ದಾನಲ್ರಯ್ಯಾ. ಮತ್ತೆ ಹೇಗೆ ಕೊಲ್ಲೋಕಾಗುತ್ತೆ

 

ಉರಿಗೌಡ : ಏನಾಯ್ತೀಗ. ಇತಿಹಾಸದೊಳಗೆ ಹೊಕ್ಕು ಮುರಿದು ಹಾಕ್ತೇವೆ ಟಿಪ್ಪುವಿನ ಸೊಕ್ಕು

 

ಕಾರಿಯಪ್ಪ : ನಾನು ಅದಕ್ಕೇ ನಿಮ್ಮನ್ನ ಹುಟ್ಸಿದ್ದು ಕಣ್ರಯ್ಯಾ. ನೀವೇ ಟಿಪ್ಪುವನ್ನ ಕೊಂದಿದ್ದು ಅಂತಾ ಗಾಸಿಪ್ ಹಬ್ಸಿದ್ದೆ. ನಾಟಕ ಬರೆದು ಆಡ್ಸಿದ್ದೆ. ಹಿಂದೂಗಳನ್ನ ಮುಸ್ಲಿಂ ವಿರುದ್ದ ಎತ್ತಿ ಕಟ್ಟಲು ಐನಾತಿ ಪ್ಲಾನ್ ಮಾಡಿದ್ದೆ. ಆದರೆ..

 

ನಂಜೇಗೌಡ : ಆದರೆ.. ಏನಾಯ್ತು ಹೇಳಿ ತಂದೆ. ನಿಮ್ಮ ಮಾತನ್ನು ಜನ ನಂಬಲಿಲ್ವಾ. ಈಗಲೂ ಆದೇಶ ಕೊಡಿ. ಇತಿಹಾಸದಿಂದ ಟಿಪ್ಪುವನ್ನು ಹಡೆಮುರಿ ಕಟ್ಟಿ ವರ್ತಮಾನಕ್ಕೆ ತಂದು ಎಲ್ಲರ ಮುಂದೆ ಮತ್ತೊಮ್ಮೆ ಹತ್ಯೆ ಮಾಡುತ್ತೇವೆ.

 

ಉರಿಗೌಡ : ಕೊಟ್ಟ ಮಾತಿಗೆ ತಪ್ಪಿದರೆ ನಾವೇ ಉರಿದುಕೊಂಡು ಸತ್ತು ಹೋಗುತ್ತೇವೆ.

 

ಕಾರಿಯಪ್ಪ : ಈಗ ಅದೆಲ್ಲಾ ಆಗದ ಕೆಲಸ ಬಿಡ್ರಪ್ಪಾ. ನೀವಿಬ್ಬರು ಟಿಪ್ಪು ಕೊಂದಿದ್ದಕ್ಕೆ ಎಲ್ರೂ ಸಾಕ್ಷಿ ಪುರಾವೆ ಕೇಳಿದ್ರು. ಸಾಬೀತುಪಡಿಸಲು ಬಲವಂತ ಮಾಡಿದ್ರು.

 

ಉರಿಗೌಡ : ಕೊಡಬೇಕಿತ್ತು.

 

ನಂಜೇಗೌಡ : ಸಾಬೀತುಪಡಿಸಬೇಕಿತ್ತು.

 

ಕಾರಿಯಪ್ಪ : ಚರಿತ್ರೆಯಲ್ಲಿ ನಿಮ್ಮ ಹೆಸರಿನವರು ಇಬ್ಬರು ಇದ್ದರೂ ಅಂತಾ ಮಾತ್ರ ಸಾಕ್ಷಿ ಸಿಕ್ತು, ಆದರೆ ಅವರೇ ಟಿಪ್ಪುವನ್ನು  ಕೊಂದರು ಅನ್ನೋದಕ್ಕೆಲ್ಲಿತ್ತು ಸಾಕ್ಷಿ. ಅದು ನಾನೇ ಕಲ್ಪಿಸಿಕೊಂಡಿದ್ದಲ್ವಾ.. 

 

ಉರಿಗೌಡ : ನೊಂದುಕೊಳ್ಳದಿರು  ತಂದೆ. ನಾವೇ ಇಲ್ವಾ ನಿಮ್ಮ ಮುಂದೆ. ನಾವು ಸಾಕ್ಷಿ ಹೇಳ್ತೇವೆ.

 

ನಂಜೇಗೌಡ : ನಮ್ಮ ಉರಿ ಮತ್ತು ನಂಜಿನ ಆಣೆಯಾಗೂ ಟಿಪ್ಪು ಕೊಂದಿದ್ದು ನಾವಿಬ್ಬರೇ ಅಂತಾ ಎಲ್ಲರಿಗೂ ಹೇಳ್ತೇವೆ. ನಿಮ್ಮ ಮರ್ಯಾದೆ ಕಾಪಾಡ್ತೇವೆ.

 

ಕಾರಿಯಪ್ಪ : ಅಪ್ಪಾ ಗೌಡರೇ.. ನೀವು ನನ್ನ ಕಲ್ಪನೆಯ ಪಾತ್ರಗಳು ಕಣ್ರಯ್ಯಾ. ನೀವು ನನ್ನ ಬಿಟ್ರೆ ಯಾರಿಗೂ ಕಾಣೀದಿಲ್ಲಾ, ನೀವು ಏನೇ ಹೇಳಿದ್ರೂ ಯಾರಿಗೂ ಕೇಳೋದಿಲ್ಲ. ನನ್ನ ಮಾತನ್ನೇ ಜನ ನಂಬಲಿಲ್ಲಾ ಇನ್ನು ಅದೃಶ್ಯವಾಗಿರೋ ನಮ್ಮನ್ಯಾರಪ್ಪಾ ನಂಬ್ತಾರೆ.

 

ಉರಿಗೌಡ : ಹೌದಾ.. ಹಂಗಾದ್ರೆ ಈಗ ಹೆಂಗೆ ಮಾಡೋದು.

 

ಕಾರಿಯಪ್ಪ : ಹಂಗೂ ಇಲ್ಲಾ ಹಿಂಗೂ ಇಲ್ಲಾ.. ಎಲ್ಲಾದ್ರೂ ಹೋಗ್ರಯ್ಯಾ.. ನಿಮ್ಮನ್ನ ಹುಟ್ಸಿದ್ ಮ್ಯಾಗೆ ನನ್ನ ಯಾರೂ ನಂಬ್ತಾನೇ ಇಲ್ಲಾ. ನಂಬಿದೋರು ಹಿಡಿದು ಹೊಡೆಯಲು ಕಾಯ್ತಿದ್ದಾರೆ

 

ನಂಜೇಗೌಡ : ಅಯ್ಯೋ ಹಂಗಂದ್ರೆ ಹೇಗೆ ತಂದೆ. ನಿಮ್ಮನ್ನೇ ನಂಬಿ ಲೋಕಕ್ಕೆ ಬಂದೆ.

 

ಉರಿಗೌಡ : ಇಷ್ಟು ದಿನ ನಮ್ಮನ್ನ ಬಳಸಿ ಈಗ ಹೀಗೆ ಬೀದಿಗೆ ಬಿಸಾಕಿದ್ರೆ ನಾವು ಎಲ್ಲಿಗೆ ಹೋಗೋದು ತಂದೆ.. ನೀವೆ ನಮಗೆ ಹಿಂದೆ ಮುಂದೆ.

 

ಕಾರಿಯಪ್ಪ : ಯೋ.. ನೀವು ನಾನು ಸೃಷ್ಟಿಸಿದ ಪಾತ್ರಗಳಯ್ಯಾಆಟ ಮುಗದ್ ಮೇಲೆ ಪಾತ್ರಗಳಿಗೇನು ಕೆಲಸ.. ಹೋಗ್ರಯ್ಯಾ ಹೋಗಿ.. ಶೋ ಕತಂ, ದುಖಾನ್ ಬಂದ್.

 

( ಅಷ್ಟರಲ್ಲಿ ಒಂದಿಷ್ಟು ಜನರ ಗುಂಪು ಹಿಡೀರಿ, ಬಿಡಬೇಡಿ, ಹೊಡೀರಿ ಎನ್ನುತ್ತಾ ಕೋಲು, ತ್ರಿಶೂಲ ಹಿಡಿದು ಇವರತ್ತಲೇ ಬರುತ್ತದೆ

 

ಅಸೋಕ : ಹಾಂ ಅಲ್ಲಿದ್ದಾನೆ.. ಹಿಡೀರಿ ಅವನನ್ನ.

 

ಚೀಟಿರವಿ : ನಮ್ಮ ಸೋಲಿಗೆ ಇವನೇ ಕಾರಣ ಬಿಡಬೇಡಿ.

 

ಚೋಬಕ್ಕ : ನಮ್ಮ ದಿಕ್ಕ ತಪ್ಸಿ ಓಡಿ ಹೋಗ್ತಿಯೇನೋ..

 

ಉರಿಗೌಡ : ತಂದೆ ಅಪ್ಪನೆ ಕೊಡಿ. ನಿಮ್ಮನ್ನು ನಿಂದಿಸುವ ಆಗುಂತಕರನ್ನು ಉರಿ ಹಚ್ಚಿ ಈಗಲೇ ಭಸ್ಮ ಮಾಡುತ್ತೇನೆ.

 

ನಂಜೇಗೌಡ : ನಂಜು ಕಾರಿ ಕತ್ತಿಯಿಂದ ಇವರ ತಲೆಗಳನ್ನೆಲ್ಲಾ ಇಲ್ಲಿಯೇ ಕತ್ತರಿಸಿ ಹಾಕುತ್ತೇನೆ.

 

ಕಾರಿಯಪ್ಪ : ( ಆತಂಕದಿಂದ ) ಅದೆಲ್ಲಾ ಆಗೋದಿಲ್ಲ ಸುಮ್ಮನಿರ್ರೊ. ನೀವು ಕೇವಲ ಕಾಲ್ಪನಿಕ ವ್ಯಕ್ತಿಗಳು. ನೀವು ಏನೇ ಮಾಡಿದ್ರೂ ಅವರಿಗೇನೂ ಮಾಡೋದಿಕ್ಕೆ ಆಗೋದಿಲ್ಲ.

 

ಚೋಬಕ್ಕ : ಏನು ನಮಗೆ ಆಗೋದಿಲ್ವಾ. ನಾವೇನು ಮಾಡ್ತೀವಂತಾ ತೋರಿಸ್ತೀವಿ. ಹಿಡೀರೋ.

 

ಅಸ್ವತ್ : ಮಾಡೋದೆಲ್ಲಾ ಮಾಡಿಬಿಟ್ಟು ಈಗ ರಾಜೀನಾಮೆ ಕೊಟ್ಟು ಊರು ಬಿಟ್ಟು ಓಡೋಗ್ತಿಯೇನೋ ನಿನ್ನ ಅಡ್ಡಡ್ಡ ಸೀಳಿಬಿಡ್ತೀವಿ.

 

ಕಾರಿಯಪ್ಪ : ಇಲ್ಲಾ ಇಲ್ಲಾ ನಾನೇನೂ ಮಾಡಿಲ್ಲ. ನನ್ನ ಬಿಟ್ಟು ಬಿಡ್ರಿ. ಎಲ್ಲಾದ್ರೂ ಹೋಗಿ ನಾಟಕ ಮಾಡ್ಕೊಂಡು ಬದುಕೊತೀನಿ

 

ಚೀಟಿರವಿ : ಯೋ ನಿನ್ನ ಮಾತು ನಂಬಿ ಉರಿಗೌಡ ನಂಜೇಗೌಡರ ಪರ್ಮನಂಟ್ ಮಹಾದ್ವಾರ ನಿರ್ಮಿಸೋಕೆ ಆರ್ಡರ್ ಕೊಟ್ಟಿದ್ದೆನಲ್ಲಯ್ಯಾ.

 

ಅಸ್ವತ್ : ಎಲ್ಲಯ್ಯಾ ನಿನ್ನ ಉರಿ ನಂಜುಗಳು. ಇಲ್ಲದವ್ರನ್ನ ಇದೆ ಅಂತಾ ಕತೆಕಟ್ಟಿ ನಮ್ಮನ್ನೇ ಯಾಮಾರಿಸ್ತೀ ಏನಯ್ಯಾ

 

ಉರಿಗೌಡ : ಹುಲುಮಾನವ. ನಾವಿಲ್ಲೇ ನಿನ್ನ ಮುಂದೇನೇ ಇದ್ದೀವಲ್ಲಯ್ಯಾ.

 

ನಂಜೇಗೌಡ : ನಮ್ಮ ತಂದೆಗೆ ಏನಾದ್ರೂ ಅಂದ್ರೆ ನಿಮ್ಮನ್ನೆಲ್ಲಾ ಕಡಿದು ತುಂಡು ಮಾಡಿ ಬಿಸಾಕ್ತೀವಿ.

 

ಕಾರಿಯಪ್ಪ : ಸಾಕು ಸುಮ್ಕಿರ್ರಯ್ಯಾ.

 

ಅಸೋಕ : ನಮಗೇನೇ ಸುಮ್ಕಿರಯ್ಯಾ ಅಂತಾ ದಮಕಿ ಹಾಕ್ತಿ ಏನಯ್ಯಾ. ಹಿಡೀರೋ ಅವನನ್ನ. ( ನಾಲ್ಕಾರು ಜನ ಚಡ್ಡಿದಾರಿಗಳು ಹಿಡಿದುಕೊಳ್ಳುವರು

 

ಕಾರಿಯಪ್ಪ : ಅಯ್ಯೋ ನಾನೇನೂ ಮಾಡಿಲ್ಲ. ನನ್ನ ಬಿಟ್ಟುಬಿಡ್ರಿ.. 

 

ಚೀಟಿರವಿ : ಬಿಡಬೇಕಾ ? ಏನೂ ಮಾಡಿಲ್ಲವಾ? ಉರಿಗೌಡ ನಂಜೇಗೌಡರನ್ನ ಯಾರಯ್ಯಾ ಹುಟ್ಸಿದ್ದು

 

ಕಾರಿಯಪ್ಪ : ನಾನೇ ಸರ್. ಆದರೆ ಅದು ನಾಟಕದಲ್ಲಿ ಹುಟ್ಸಿದ್ದು. ಪಾತ್ರಗಳಷ್ಟೇ.

 

ಚೋಬಕ್ಕ : ಅದನ್ನ ಮೊದಲೇ ಬೊಗಳಬೇಕಿತ್ತಲ್ಲಯ್ಯಾ. ಟಿಪ್ಪು ಕೊಂದವರು ಇವರೇ ಅದಕ್ಕೆ ಸಾಕ್ಷಿ ಪುರಾವೆ ಇವೆ ಅಂತಾ ನೀನೇ ಅಲ್ವೇನಯ್ಯಾ ಹೇಳಿದ್ದು

 

ಚೀಟಿರವಿ : ಪುರಾವೆ ಹುಡ್ಕೋದಕ್ಕೆ ಒಂದ್ ಸಮೀತಿ ರಚಿಸಿದ್ದೆ ಗೊತ್ತೇನಯ್ಯಾ.

 

ಕಾರಿಯಪ್ಪ : ಗೊತ್ತು ಸರ್.. ನಾನು ಬೇಕಂತಲೇ ಮಾಡಿದ್ದಲ್ಲ ಸರ್. ಸಂಘಕ್ಕೆ ಸಹಕಾರಿ ಅಗ್ಲಿ ಅಂತಾ ಮಾಡಿದ್ದು. ಸಾಬರ ವಿರುದ್ದ ಹಿಂದೂಗಳನ್ನ ಕೆರಳಿಸೋಕೆ ಮಾಡಿದ್ದು. ಕೋಮುದ್ರುವೀಕರಣ ಆಗಲಿ ಅಂತಾ ಮಾಡಿದ್ದು. ಒಕ್ಕಲಿಗರ ಮತ ಸಾಲಿಡ್ ಆಗಿ ಸಿಗಲಿ ಅಂತಾ ಮಾಡಿದ್ದು. ಟಿಪ್ಪು ವಿರುದ್ದ ಕೊಡವರ ಸಿಟ್ಟು ಕೆರಳಲಿ ಅಂತಾ ಮಾಡಿದ್ದು.

 

ಅಸೋಕ : ಥೂ ನಿನ್ನ ಜನ್ಮಕ್ಕಿಷ್ಟು. ನಿನ್ನ ಮಾತು ನಂಬಿ ನಾವು ಉರಿನಂಜೇಗೌಡರನ್ನ ಹೀರೋ ಮಾಡಿದ್ವಿ. ಆದರೆ ಏನಾಯ್ತು? ನಾವೇ ಈಗ ಜಿರೋ ಆಗಿ ಕೂತಿದ್ದೀವಿ.

 

ಚೀಟಿರವಿ : ಗೌಡರ ಕುಲ ನಮ್ಮ ವಿರುದ್ದ ತಿರುಗಿಬಿತ್ತು. ಸುಳ್ಳು ಸುದ್ದಿ ಹುಟ್ಸಿದ್ದೀವಿ ಅಂತಾ ಹಿಂದುಳಿದವರು ದಲಿತರು ವಿರೋಧಿಗಳಾದ್ರು. ಟಿಪ್ಪುಗೆ ಅವಮಾನ ಅಂತಾ ಸಾಬರು ಒಂದೇ ಒಂದು ಮತ ಹಾಕಿಲ್ಲ. ನನ್ನಂತಾ ನನ್ನನ್ನೇ ಚುನಾವಣೆಯಲ್ಲಿ ಸೋಲಿಸಿ ಬಿಟ್ರಲ್ಲಯ್ಯಾ

 

ಅಸೋಕ : ಯೋ ನಮ್ಮ ಜಾತಿ ಗೌಡ್ರುಗಳು ಹೆಚ್ಚಾಗಿದ್ದಾರೆ ಅಂತಾ ನಂಬಿ ಕನಕಪುರದಲ್ಲಿ ಚುನಾವಣೆಗೆ ನಿಂತ್ಕೊಂಡೆ. ನನ್ನ ಠೇವಣಿ ಸಹ ಹೋಯ್ತಲ್ಲಯ್ಯಾ

 

ಚೋಬಕ್ಕ : ಅದು ಹೋಗಲಿ. ನಮ್ಮ ಪಕ್ಷದ ಭದ್ರ ಕೋಟೆ ಕೊಡುಕಿನಲ್ಲೇ ನಾವು ಛಿದ್ರವಾಗೋದಿವಲ್ವಯ್ಯಾ.

 

ಅಸ್ವತ್ : ರಾಷ್ಟ್ರೀಯ ಪಕ್ಷ ನಮ್ದು. ನಿನ್ನಂತೋರು ಹುಟ್ಟಿಸೋ ಸುಳ್ಳು ಸುದ್ದಿಯಿಂದಾ ನಮ್ಮ ಪಕ್ಷ ಸೋತು ಸುಣ್ಣವಾಯ್ತಲ್ಲಯ್ಯಾ

 

ಕಾರಿಯಪ್ಪ : ಅದಕ್ಕೆ ಬೇರೆ ಬೇಕಾದಷ್ಟು ಕಾರಣಗಳಿವೆ ಸರ್. ನಾನು ಟಿಪ್ಪು ನಿಜಕನಸುಗಳು ಅಂತಾ ನಾಟಕ ಬರದೆ, ಪಾತ್ರ ಸೃಷ್ಟಿಸಿದೆ, ನಿರ್ದೇಶನ ಮಾಡಿದೆ, ಸರಕಾರಿ ರೊಕ್ಕದಲ್ಲಿ ಪ್ರದರ್ಶನ ಮಾಡಿದೆ. ಇದರಲ್ಲಿ ನಂದೇನಿದೆ ತಪ್ಪು..

 

ಚೋಬಕ್ಕ : ಮಾಡೋದೆಲ್ಲಾ ಮಾಡಿಬಿಟ್ಟು ಏನೂ ಮಾಡಿಲ್ಲಾ ಅಂತಾನೆ.. ಹೊಡೀರೋ ನನ್ನ ಮಗನಿಗೆ.

 

ಚೀಟಿರವಿ : ಅದೇನೋ ಅಂತಾರಲ್ಲಾ, ಕಾಗೆ ಕರಕೊಂಡು ಬಂದು ಅಧಿಕಾರ ಕೊಟ್ರೆ ಕಚೇರಿ ತುಂಬಾ ಕಕ್ಕಾ ಮಾಡಿತಂತೆ. ಅಂತವನು ಇವನು.. ಇಕ್ರಲಾ ನಾಲ್ಕು

 

( ಚಡ್ಡಿ ವೀರರು ಮನಬಂದಂತೆ ಹೊಡೆಯುತ್ತಾರೆ. ಬಟ್ಟೆ ಹರಿದು ಹಾಕುತ್ತಾರೆ. ಕಾರಿಯಪ್ಪ ತಪ್ಪಾಯ್ತು ಬಿಡ್ರೋ, ನಿಮ್ಮ ಪಾದಕ್ಕೆ ಅಡ್ಡಂಡ್ ಬೀಳ್ತೀನಿ ಬಿಡ್ರಣ್ಣಾ ಅಂತಾ ಗೋಳಾಡುತ್ತಾ ಬಾಯಿಬಡಿದುಕೊಳ್ಳುತ್ತಾನೆ)

 

ಅಸೋಕ : ಬನ್ರಿ ಹೊಗೋಣ. ಉರಿನಂಜಿನವನಿಗೆ ಚೆನ್ನಾಗಿ ಪಾಠ ಕಲಿಸಿದ್ದಾಯ್ತುಈಗ ನಾವೆಲ್ಲಾ ಪಾರ್ಟಿ ಆಫೀಸಿಗೆ ಹೋಗಿ ಸೋಲಿನ ಆತ್ಮಾವಲೋಕನ ಮಾಡೋಣಂತೆ. ( ಎಲ್ಲರೂ ಹೊರಡುವರು)

 

( ಮೈಎಲ್ಲಾ ಗಾಯವಾಗಿ ಹರಿದ ಬಟ್ಟೆಗಳನ್ನು ನೋಡಿಕೊಳ್ಳುತ್ತಾ ಕಾರಿಯಪ್ಪ ಗೋಳಾಡತೊಡಗುತ್ತಾನೆ.)

 

ಕಾರಿಯಪ್ಪ : (ರಾಗಬದ್ದವಾಗಿ) ಅಯ್ಯಯ್ಯೋ ನಾನೇನು ಮಾಡಬಾರದ್ದು ಮಾಡ್ದೆ. ಇವರಿಗೆ ಬರಬಾರದ್ದು ಬರ, ಚಾಪೆ ಸುತ್ತಕೊಂಡು ಹೋಗಾ, ನಾಯಿಗೆ ಹೊಡದಂಗೆ ಹೊಡದ್ ಹೋದ್ರಲ್ಲೋ ಇವರ ಕೈಗೆ ಕರಿನಾಗರ ಕಡಿಯಾ. ( ಜೋರಾಗಿ ಆಳತೊಡಗುತ್ತಾನೆ, ಅಕ್ಕಪಕ್ಕದಲ್ಲಿ ಕೂತ ಉರಿಗೌಡ ನಂಜೇಗೌಡರು ಕಣ್ಣೀರು ವರೆಸಿ ಸಮಾಧಾನಮಾಡುತ್ತಾರೆ

 

( ಮೊಬೈಲಲ್ಲಿ ಹಾಡು ಕೇಳುತ್ತಾ ಹೋದ ವ್ಯಕ್ತಿ ಮರಳಿ "ಎನೋ ಮಾಡಲು ಹೋಗಿ ಏನು ಮಾಡಿದೆ ನೀನು..." ಹಾಡು ಹಾಕಿಕೊಂಡು ಬರುತ್ತಾನೆ)

 

ವ್ಯಕ್ತಿ : ಓಹೋ.. ಆಯ್ತಾ ಮಹಾ ಮಂಗಳಾರತಿ. ಅದಕ್ಕೆ ಹೇಳೋದು ಜಾಸ್ತಿ ಮೆರೀಬಾರದು ಅಂತಾ. ದುರಹಂಕಾರ ಅತಿ ಆದರೆ ಹಿಂಗೇ ಆಗೋದು. ಮಾಡಿದ್ದುಣ್ಣೋ ಅಡ್ಡಂಡಾ.

ನಿನ್ನಂತೋರು ಭೂಮಿಗೆ ಭಾರ ಕೂಳಿಗೆ ದಂಡಹಾ.. ಥೂ.. ನಿನ್ನ ಜನ್ಮಕ್ಕಿಷ್ಟು..

 

(ಉಗಿದು ಮತ್ತದೇ ಹಾಡು ಹಾಕಿಕೊಂಡು ಹೋಗುತ್ತಾನೆ. ಕಾರಿಯಪ್ಪ ಪೆಚ್ಚಾಗಿ ಕುಳಿತುಕೊಳ್ಳುತ್ತಾನೆ. ಉರಿ ನಂಜುಗಳು ಅದೃಶ್ಯರಾಗುತ್ತಾರೆ)

 

 

*-ಶಶಿಕಾಂತ ಯಡಹಳ್ಳಿ*

 

( ಮೇಲಿನ ಪ್ರಹಸನವು  ಕಾಲ್ಪನಿಕವಾಗಿದ್ದು ಆಕಸ್ಮಿಕವಾಗಿ ಯಾರಿಗಾದರೂ ಅನ್ವಯಿಸಿದರೆ ಅದು ಕೇವಲ ಕಾಕತಾಳೀಯವಾಗಿರುತ್ತದೆ. ಕ್ಷಮಿಸಿ ನಾ ಬರೆದಿದ್ದೆಲ್ಲಾ ತಮಾಷೆಗಾಗಿ..)

 

(ಟಿಪ್ಪುವಿನ ನಿಜ ಕನಸುಗಳು ಎನ್ನುವ ದ್ವೇಷಪೂರ್ಣ ಹಾಗೂ ವಿವಾದಾತ್ಮಕ ನಾಟಕವನ್ನು ರಚಿಸಿ ರಂಗಾಯಣಕ್ಕೆ ನಿರ್ದೇಶಿಸಿದ ರಂಗಾಯಣದ ನಿರ್ದೇಶಕರಾಗಿದ್ದ ಅಡ್ಡಂಡ ಕಾರ್ಯಪ್ಪನವರು ಬಿಜೆಪಿ ಪಕ್ಷ ಸೋತ ನಂತರ ರಂಗಾಯಣಕ್ಕೆ ರಾಜೀನಾಮೆ ಇತ್ತು ಹೋದಾಗ ಬರೆದ ರಾಜಕೀಯ ವಿಡಂಬನಾತ್ಮಕ ಪ್ರಹಸನ ಇದು)

 

 

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ