ದ್ವೇಷದ ಮಾರುಕಟ್ಟೆಯಲಿ ಪ್ರೀತಿಯಂಗಡಿ ( ಪ್ರಹಸನ-15)

 ಪ್ರಹಸನ-15

ದ್ವೇಷದ ಮಾರುಕಟ್ಟೆಯಲಿ ಪ್ರೀತಿಯಂಗಡಿ 

 

(ರಾಜ್ಯಾಧಿಕಾರ ಪಡೆಯಲು ಮತ್ತೆ ಪ್ರಯತ್ನಿಸುತ್ತಿದ್ದ ಹಿಂದಿನ ದೊರೆ " ನಾನು ಮತ್ತೆ ರಾಜನಾದರೆ ರಾಜ್ಯವಾಸಿಗಳಿಗೆಲ್ಲಾ ಉಚಿತ ಊಟದ ವ್ಯವಸ್ಥೆ ಮಾಡುವೆ ಎಂದು ರಾಜ್ಯಾದ್ಯಂತ ಡಂಗೂರ ಸಾರಿಸಿದ್ದ. ಈಗಿರುವ ಭ್ರಷ್ಟ ದೊರೆಯನ್ನು ಪಟ್ಟದಿಂದ ಇಳಿಸಲು ಜನ ನಿರ್ಧರಿಸಿ ಓಡಿಸಿದರು. ಮೊದಲಿದ್ದ ದೊರೆ ಮತ್ತೆ ಪಟ್ಟಕ್ಕೆ ಬಂದು ಮಂತ್ರಿ ಪರಿಷತ್ತಿನ ನಡೆಸುತ್ತಿರುವಾಗ)

 

ಹಿನ್ನೆಲೆಯಲ್ಲಿ ದ್ವನಿಗಳು  : ಊಟ.. ಊಟ.. ಎಲ್ಲಿ ಊಟ.. ಊಟ ಕೊಡಿ.. ಉಚಿತ ಊಟ ಬೇಕು..

 

ರಾಜ : ಹೊರಗಡೆ ಅದೇನು ಗಲಾಟೆ ಮಂತ್ರಿಗಳೇ..

 

ಮಂತ್ರಿ : ಅದೇ ದೊರೆಗಳೇ. ಪಟ್ಟಕ್ಕೆ ಬಂದ ಕೂಡಲೇ ಉಚಿತ ಊಟದ ವ್ಯವಸ್ಥೆ ಮಾಡುತ್ತೇನೆಂದು ತಾವು ಭರವಸೆ ಕೊಟ್ಟಿದ್ದೀರಲ್ಲಾ, ಈಗ ಎಲ್ಲಿ ಊಟ ಎಂದು ಕೆಲವು ನಿರ್ಗಮಿತ ರಾಜನ ಚೇಲಾ ಬಾಲಗಳು ಗಲಾಟೆ ಮಾಡುತ್ತಿವೆ.

 

ರಾಜ : ಊಟ ತಯಾರಿಗೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೀರಿ ತಾನೆ? ಹೇಳಿದ್ದೇವೆ ಎಂದ ಮೇಲೆ ಕೊಡಲೇಬೇಕು.

 

ಮಂತ್ರಿ : ರಾಜ್ಯವಾಸಿಗಳಿಗೆಲ್ಲರಿಗೂ ಉಚಿತ ಊಟ ಎಂದರೆ ಬೊಕ್ಕಸದ ಮೇಲೆ ಭಾರೀ ಭಾರ ಬೀಳುತ್ತದಲ್ಲವೇ ದೊರೆಗಳೇ. ಅದೂ ಅಲ್ಲದೇ ಹಿಂದಿದ್ದ ರಾಜರು ಭಯಂಕರ ಸಾಲದ ಹೊರೆಯನ್ನು ಬೇರೆ ಹೊರೆಸಿ ಹೋಗಿದ್ದಾರೆ

 

ರಾಜ : ಅದೇನೇ ಇರಲಿ. ಮಾತು ಕೊಟ್ಟ ಮೇಲೆ ಮುಗೀತು. ಎಲ್ಲರಿಗೂ ಉಚಿತ ಊಟದ ವ್ಯವಸ್ಥೆ ಮಾಡಿ. ಇದು ರಾಜಾಜ್ಞೆ.

 

ಮಂತ್ರಿ : ಎಲ್ಲರಿಗೂ ಉಚಿತ ಎಂದರೆ ರಾಜ್ಯದ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ ದೊರೆಗಳೇ. ಕೇವಲ ಬಡವರಿಗೆ ಮಾತ್ರ ಉಚಿತ ಊಟ ಕೊಡುವುದು ಸೂಕ್ತ.

 

ರಾಜ : ಏನು ಮಾತು ಅಂತಾ ಹೇಳುತ್ತಿದ್ದೀರಿ ಅಮಾತ್ಯರೇ. ವಚನ ಕೊಟ್ಟಾಗಿದೆ, ಎಲ್ಲರಿಗೂ ಎಂದರೆ ಎಲ್ಲರಿಗೂ ಕೊಡಲೇಬೇಕು. ತಾರತಮ್ಯ ಕೂಡದು. ಶ್ರೀಮಂತರಿಗೆ ತೆರಿಗೆ ಹೆಚ್ಚಿಸಿ, ಆಡಳಿತ ವೆಚ್ಚವನ್ನು ಕಡಿತ ಗೊಳಿಸಿ. ಉಚಿತ ಊಟದ ಯೋಜನೆ ಕೂಡಲೇ ಜಾರಿಗೊಳಿಸಿ.

 

ಮಂತ್ರಿ : ಹೀಗೆ ಉಚಿತ ಊಟ ಕೊಟ್ಟರೆ ಜನರು ಸೋಮಾರಿಗಳಾಗುತ್ತಾರೆ, ಯಾರೂ ಏನೂ ಕೆಲಸ ಮಾಡುವುದಿಲ್ಲವೆಂದು ಕೆಲವು ಜನರು ಆಡಿಕೊಳ್ಳುತ್ತಿದ್ದಾರೆ ಪ್ರಭುಗಳೇ.

 

ರಾಜ : ಹೊಟ್ಟೆ ತುಂಬಿದವರು ಆಡಿಕೊಳ್ಳಲಿ ಬಿಡು ಮಂತ್ರಿಗಳೇ. ಮನುಷ್ಯರಿಗೆ ಬರೀ ಊಟ ಮಾತ್ರ ಸಾಲದು. ಬಟ್ಟೆಬರೆ, ಅಗತ್ಯ ಸಾಮಾನು ಸರಂಜಾಮುಗಳಿಗೆ ಬೇಕಾದ ಹಣಕ್ಕಾಗಿ ದುಡಿಮೆ ಮಾಡಲೇ ಬೇಕಾಗುತ್ತದೆ. ಮನೆಯವರ ಆರೋಗ್ಯ, ಮಕ್ಕಳ ಶಿಕ್ಷಣ ಮದುವೆಗಳಿಗಾದರೂ ಶ್ರಮ ಪಡಲೇ ಬೇಕಾಗುತ್ತದೆ. ಕೇವಲ ಊಟವೊಂದು ಉಚಿತವಾಗಿ ಸಿಕ್ಕರೆ ಇದ್ದಲ್ಲೇ ಬಿದ್ದು ಒದ್ದಾಡಲು ಮನುಷ್ಯರೇನು ಪ್ರಾಣಿಗಳೇ. ಮೊದಲು ಉಚಿತ ಊಟದ ಯೋಜನೆ ಜಾರಿಗೆ ತರಲು ಸರ್ವ ಸಿದ್ದತೆ ಮಾಡಿಕೊಳ್ಳಿ.

 

ಮಂತ್ರಿ : ಎಲ್ಲಾ ನಿಮ್ಮ ಆದೇಶದಂತೆಯೇ ಆಗಲಿ ಪ್ರಭುಗಳೇ. ಈಗಾಗಲೇ ಕೆಲವೊಂದು ವ್ಯವಸ್ಥೆ ಮಾಡಲಾಗಿದೆ. ಸಾಮಾನು ಸರಂಜಾಮುಗಳನ್ನು ಸಂಗ್ರಹಿಸಲಾಗಿದೆ. ಅಡುಗೆಯವರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

 

ಹಿನ್ನೆಲೆ ದ್ವನಿ : ಊಟ.. ಉಚಿತ ಊಟ ಯಾವಾಗ ಕೊಡ್ತೀರಾ? ಊಟ ಬೇಕು ಊಟ..

 

ಮಂತ್ರಿ : (ಕಿಟಕಿಯ ಬಳಿ ಹೋಗಿ) ಆಯ್ತು.. ಕೊಡುತ್ತೇವೆ. ಅಡುಗೆ ಸಿದ್ದವಾಗುವವರೆಗೂ ಸ್ವಲ್ಪ ತಾಳ್ಮೆ ಇರಲಿ. ಕೂಗಾಡಬೇಡಿ. ದ್ವಾರಪಾಲಕರೇ ಅದೇನು ಕೆಲವು ಶ್ವಾನಗಳು ಅಲ್ಲಿ ಗುಂಪಾಗಿ ನಿಂತು ಬೊಗಳುತ್ತಿವೆ ಹೋಗಿ ನೋಡಿ.

 

ದ್ವಾರಪಾಲಕ : ದೊರೆಗಳು ಪಟ್ಟಕ್ಕೆ ಬಂದ ಕ್ಷಣದಿಂದಾ ಕೆಲವು ಬಿಡಾಡಿ ನಾಯಿಗಳು ಅರಮನೆಯ ಸುತ್ತಲೂ ನೆರೆದು ಊಟ ಊಟವೆಂದು ಅರಚುತ್ತಿವೆ ಸ್ವಾಮಿ. ದೂರ ಹೋಗಿ ಎಂದು ಗದರಿಸಿದರೂ ಕೇಳದೇ ಗುಂಪು ಕಟ್ಟಿಕೊಂಡು ದಾಳಿ ಮಾಡಲು ಬರುತ್ತಿವೆ. ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ

 

ಮಂತ್ರಿ : ಹೋಗಲಿ, ಇವರು ಯಾರು? ತಮಟೆ ಬಡಿದುಕೊಂಡು ಜನರನ್ನು ಪ್ರಚೋದಿಸುತ್ತಿರುವವರು

 

ದ್ವಾರಪಾಲಕ : ಹೋ ಅವರೋ ಹಿಂದಿನ ಪ್ರಭುಗಳು ಸಾಕಿದ ಶ್ವಾನಗಳು ಸ್ವಾಮಿ. ಶ್ವಾನಗಳು ಎಂದಿದ್ದಕ್ಕೆ ಕ್ಷಮೆ ಇರಲಿ.. ಅವರು ಅದೆಂತದೋ ಮಾಧ್ಯಮದವರಂತೆ. ಹಗಲು ರಾತ್ರಿ ಎನ್ನದೇ ದೊರೆಗಳ ವಿರುದ್ದ ಬಾಯಿಬಡಿದುಕೊಂಡು ಹಳೆಯ ದೊರೆಗಳಿಗೆ ಸ್ವಾಮಿನಿಷ್ಟೆ ತೋರಿಸುತ್ತಿವೆ. ಈಗ ಉಚಿತ ಊಟ ಹೇಗೆ ಕೊಡ್ತಾರೆ, ಯಾವಾಗ ಕೊಡ್ತಾರೆ, ಎಲ್ಲಿಂದ ಕೊಡ್ತಾರೆ, ಕೊಡೋದಕ್ಕೆ ಆಗುತ್ತಾ, ನಿಬಂಧನೆ ಹಾಕಿ ಕೊಡ್ತಾರಾ, ನಂಬಿಕೆ ದ್ರೋಹ ಮಾಡ್ತಾರಾ? ಅಂತೆಲ್ಲಾ ಪ್ರಶ್ನೆ ಕೇಳಿ ಜನರನ್ನ ಅರಸರ ವಿರುದ್ದ ಎತ್ತಿ ಕಟ್ತಿದ್ದಾರೆ ಸ್ವಾಮಿ.

 

ರಾಜ : ಅಮಾತ್ಯರೇ.. ಇದು ಅತಿಯಾಯಿತು. ಉಚಿತ ಊಟದ ಸಿದ್ದತೆಗೆ ಸ್ವಲ್ಪ ಸಮಯಾವಕಾಶ ಬೇಕಲ್ಲವೇ? ಯಾಕೆ ಇವರೆಲ್ಲಾ ಹೀಗೆ ಸಹನೆ ಕಳೆದುಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಇವರು ಊಟವನ್ನೇ ಮಾಡುತ್ತಿರಲಿಲ್ಲವೇ.

 

ಮಂತ್ರಿ : ಮಾಡುತ್ತಿದ್ದರು ದೊರೆಗಳೇ. ಯಾವಾಗ ನೀವು ಉಚಿತ ಊಟ ಕೊಡುತ್ತೇವೆಂದು ಭರವಸೆ ಕೊಟ್ಟಿರೋ ಬಹುಷಃ ಆಗಿನಿಂದ ಅಡುಗೆ ಮಾಡುವುದನ್ನೇ ಬಿಟ್ಟವರಂತೆ ಆತುರದಲ್ಲಿದ್ದಾರೆ. ಹಿಂದಿನ ದೊರೆಗಳ ಕಾಲಾಳುಗಳು ಹಾಗೂ ಸಾಕಿಕೊಂಡಿದ್ದ ಶ್ವಾನಪಡೆಗಳು ಈಗ ಜನರನ್ನು ಪ್ರಚೋದಿಸುತ್ತಿದ್ದಾರೆ. ರಾಜದ್ರೋಹಕ್ಕೆ ಪ್ರೇರೇಪಿಸುತ್ತಿದ್ದಾರೆ. ನೀವು ಆಜ್ಞೆ ಕೊಟ್ಟರೆ ಇಂತವರೆಲ್ಲರನ್ನೂ ಬಂಧಿಸಿ ಬಂಧೀಖಾನೆಗೆ ಕಳುಹಿಸುವೆ.

 

ರಾಜ : ಮಂತ್ರಿಗಳೇ.. ನಾವೂ ಹಿಂದಿನ ರಾಜರಂತೆ ದ್ವೇಷದ ರಾಜಕಾರಣ ಮಾಡಿದರೆ ಅವರಿಗೂ ನಮಗೂ ವ್ಯತ್ಯಾಸವೇನು?. ನಾವು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕಿದೆ. ಅವರಿಗೆ ತಾಳ್ಮೆ ಇಲ್ಲದಿದ್ದರೆ ಏನಾಯ್ತು. ನಾವು ತಾಳ್ಮೆಯಿಂದ ಇರೋಣ. ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳೋಣ

 

ಮಂತ್ರಿ : ಎಲ್ಲಾ ನಿಮ್ಮ ಚಿತ್ತ ದೊರೆ. ಆದರೆ ನಿಮ್ಮ ಪ್ರೀತಿ ಹಂಚುವ ಅಂಗಡಿಗಳನ್ನೇ ನಾಶ ಮಾಡುವ ನೀಚರಿಂದ ನಾವು ಎಚ್ಚರದಿಂದ ಇರಬೇಕಿದೆ

 

ರಾಜ : ಇರೋಣ ಇರೋಣ.. ಆದರೆ ಮೊದಲು ನಾವು ಕೊಟ್ಟ ಮಾತುಗಳನ್ನು ಯಾವುದೇ ತ್ಯಾಗ ಮಾಡಿಯಾದರೂ ಉಳಿಸಿಕೊಳ್ಳೋಣ. ರಾಜ್ಯದ ಜನರ ಹಸಿವೆಯನ್ನು ನೀಗಿಸೋಣ. ಶ್ರಮಿಕರ ಶ್ರಮದಿಂದಲ್ಲವೇ ರಾಜ್ಯ ನಿಂತಿರೋದು. ಅವರಿಗೆ ಎರಡು ಹೊತ್ತಿನ ಊಟ ಕೊಡದೇ ಹೋದರೆ ನಾವು ರಾಜನಾಗಿ ಏನು ಪ್ರಯೋಜನ. ಹೋಗಿ ಮೊದಲು ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿ

 

ಮಂತ್ರಿ : ಆಯ್ತು ಮಹಾರಾಜರೇ. ನಿಮ್ಮ ಆದೇಶದ ಪಾಲನೆ ಮಾಡಲಾಗುವುದು

 

(ಅಷ್ಟರಲ್ಲಿ ರಾಜಸಭೆಗೆ ಕೆಲವರು ಧಿಕ್ಕಾರ ಕೂಗುತ್ತಾ ಪ್ರವೇಶಿಸುತ್ತಾರೆ

 

ವ್ಯಕ್ತಿ 1 : ವಚನ ಭ್ರಷ್ಟ ರಾಜರಿಗೆ

 

ಎಲ್ಲರೂ : ಧಿಕ್ಕಾರ.

 

ವ್ಯಕ್ತಿ 2 : ಉಚಿತ ಊಟ ಕೊಡದ ನಂಬಿಕೆ ದ್ರೋಹಿ ರಾಜರಿಗೆ 

 

ಎಲ್ಲರೂ : ಧಿಕ್ಕಾರ.

 

ಮಂತ್ರಿ : ಯಾರಲ್ಲಿ.. ರಾಜದ್ರೋಹಿಗಳನ್ನು ಬಂಧಿಸಿ ಈಗಲೇ ಕಾರಾಗ್ರಹಕ್ಕೆ ತಳ್ಳಿ.

 

ರಾಜ : ಮಂತ್ರಿಗಳೇ. ಆಗಲೇ ಹೇಳಿದ್ದು ಮರೆತು ಹೋಯಿತೆ. ಇವರು ದ್ವೇಷದ ಬೆಂಕಿಯನ್ನು ಹಚ್ಚುವವರು ಹಚ್ಚಲಿ, ಆದರೆ ನಾವು ಪ್ರೀತಿಯ ನೀರನ್ನು ಎರಚಿ ಶಾಂತರನ್ನಾಗಿಸೋಣ

 

ವ್ಯಕ್ತಿ 1 : ಪಟ್ಟಕ್ಕೆ ಬಂದ ಕೂಡಲೇ ಎಲ್ಲರಿಗೂ ಉಚಿತ ಊಟ ಕೊಡುತ್ತೇನೆಂದು ಹೇಳಿದ್ದನ್ನು ನೀವು ಮರೆತಿದ್ದೀರಿ ರಾಜರೇ.

 

ವ್ಯಕ್ತಿ  2 : ಊಟ.. ಎಲ್ಲಿ ಉಚಿತ ಊಟ, ಈಗಲೇ ಕೊಡಿ.. ಊಟ ಬೇಕೆ ಬೇಕು ಊಟ.

 

ರಾಜ : ( ಶಾಂತಚಿತ್ತದಿಂದ) ಆಯ್ತು, ಕೊಟ್ಟ ವಚನ ಪಾಲಿಸಲಾಗುವುದು. ತಾಳ್ಮೆ ಇರಲಿ.

 

ವ್ಯಕ್ತಿ 1: ಇನ್ನೆಲ್ಲಿಯ ತಾಳ್ಮೆ. ಜನರು ಹಸಿವೆಯಿಂದ ಸಾಯುತ್ತಿದ್ದಾರೆ ಸ್ವಾಮಿ, ಊಟ ಬೇಕು ಊಟ.

 

ರಾಜ : ಆಗಬಹುದು. ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರೆ ಈಗಲೇ ಊಟದ ವ್ಯವಸ್ಥೆ ಮಾಡುವೆ. ನಿಮ್ಮ ಮನೆಯಲ್ಲಿ ಅಡುಗೆ ಇದ್ದಕ್ಕಿದ್ದಂತೆ ತಯಾರಾಗುತ್ತದೆಯೇ? ಅದನ್ನು ಸಿದ್ದಗೊಳಿಸಲು ಒಂದಿಷ್ಟಾದರೂ ಸಮಯವನ್ನು ನಿಮ್ಮ ಮನೆಯೊಡತಿಗೆ ಕೊಡಬೇಕಲ್ಲವೇ? ತಾಳ್ಮೆಗೆಟ್ಟು ತಟ್ಟೆ ಬಾರಿಸಿದರೆ ಊಟವೇನು ಆಕಾಶದಿಂದ ಉದುರುತ್ತದೆಯಾ

 

ವ್ಯಕ್ತಿ : ಅದೆಲ್ಲಾ ನಮಗೆ ಗೊತ್ತಿಲ್ಲಾ ಮಾರಾಜರೇ. ಉಚಿತ ಊಟ ಕೊಡ್ತೀವೆಂದು ಹೇಳಿದ್ದೀರಾ, ಈಗಲೇ ಕೊಡಿ. ರಾಜ್ಯದ ಮಹಾಜನತೆ ಕೇಳ್ತಿದ್ದಾರೆ, ತಕ್ಷಣ ಕೊಡಿ..

 

ರಾಜ : ಎಲ್ಲಾ ಜನರೂ ಕೇಳ್ತಿದ್ದಾರೋ ಇಲ್ಲಾ ನೀವು ಜನರನ್ನು ಕೇಳುವಂತೆ ಪ್ರಚೋದಿಸುತ್ತಾ ಇದ್ದೀರೋ?

 

ತಮಟೆ ವ್ಯಕ್ತಿ : ರಾಜರೇ. ಪ್ರಶ್ನೆ ಕೇಳುವುದು ನಮ್ಮ ಕೆಲಸ. ಯಾವಾಗ ಊಟ ಉಚಿತ ಕೊಡುತ್ತೀರಿ, ಹೇಗೆ ಕೊಡುತ್ತೀರಿ, ಎಲ್ಲಿಂದ ಕೊಡುತ್ತೀರಿ

 

ರಾಜ : ತಮಟೇ ವೀರರೇಸ್ವಲ್ಪ ಸಹನೆ  ಇರಲಿ. ಹಿಂದಿನ ರಾಜರು ಬಿಟ್ಟಿಯಾಗಿ ಹಣ, ಉದ್ಯೋಗ ಕೊಡ್ತೀವಿ ಅಂತಾ ಹೇಳಿ ಕೊಡದೇ ಇದ್ದಾಗ ಹೀಗೇ ತಮಟೆ ಬಾರಿಸಿದ್ರಾ, ಇಲ್ಲವಲ್ಲಾ. ಹೋಗಲೀ ರೈತರ ಆದಾಯ ದ್ವಿಗುಣ ಮಾಡುತ್ತೇವೆಂದು ಬುರುಡೆ ಬಿಟ್ಟಾಗ ನಿಮ್ಮ ತಮಟೆ ಏನು ಮಾಡ್ತಿತ್ತು. ನಿಮ್ಮ ನಿಯತ್ತು ಸತ್ಯದ ಪರವೋ ಇಲ್ಲಾ ಸುಳ್ಳಿನ ಪರವೋ.

 

ತಮಟೆ ವ್ಯಕ್ತಿ : ( ತಮಟೆ ಬಡೆದುಕೊಂಡು ಹೊರಗೆ ಹೋಗುತ್ತಲೇ) ಕೇಳ್ರಪ್ಪೋ ಕೇಳ್ರಿ. ರಾಜರಿಗೆ ಕೂಡಲೇ ಕೊಟ್ಟ ಮಾತು ನಡೆಸೋಕೆ ಆಗೋದಿಲ್ಲವಂತೆ. ಇಂತಹ ವಚನ ಭ್ರಷ್ಟ ರಾಜ ಬೇಕಾ? ಕೇಳ್ರಪ್ಪೋ ಕೇಳಿ.

 

ಮಂತ್ರಿ : ಮಹಾರಾಜರೇ ಕೂಗುಮಾರಿಗಳನ್ನು ಹಿಡಿದು ತಂದು ಬಾಯಿಗೆ ಬೀಗ ಹಾಕಿಸುವೆ, ಆದೇಶ ಕೊಡಿ.

 

ರಾಜ : ಅದರಿಂದ ಏನೂ ಪ್ರಯೋಜನವಿಲ್ಲ. ತಮಟೆ ಹೊಡೆಯೋದೇ ಅವರ ಕಾಯಕ, ಹೊಡೆಯಲಿ ಬಿಡಿ. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡೋಣ, ಕೊಟ್ಟ ಮಾತು ಉಳಿಸಿಕೊಳ್ಳೋಣ. ಆಗ ಜನರೇ ಮೆಚ್ಚಿಕೊಳ್ಳುತ್ತಾರೆದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯೋಣ.

 

ವ್ಯಕ್ತಿ : ಯಾವ ಅಂಗಡಿಯನ್ನಾದರೂ ತೆರೆಯಿರಿ, ಮೊದಲು ಕೂಡಲೇ ಉಚಿತ ಊಟ ಕೊಡಿ ರಾಜರೇ..

 

ರಾಜ : ಆಯಿತು. ಕೊಟ್ಟ ಮಾತು   ಗಾಳಿಗೆ ತೂರಿಬಿಟ್ಟ ಹಿಂದಿನ ರಾಜರನ್ನು ಹೀಗೆಯೇ ಹಿಡಿದು ನೀವು ಕೇಳಬಹುದಾಗಿತ್ತು ಕೇಳಲಿಲ್ಲ. ಈಗ ಕೇಳಲು ಬಂದಿದ್ದೀರಿ, ಸಂತೋಷ. ಸ್ವಲ್ಪ ಕಾಲಾವಕಾಶ ಕೊಡಿ, ನಾವು ಕೊಟ್ಟ ಎಲ್ಲ ಭರವಸೆಗಳನ್ನೂ ಈಡೇರಿಸುತ್ತೇವೆ

 

ವ್ಯಕ್ತಿ 1 : ( ಇನ್ನೊಬ್ಬ ವ್ಯಕ್ತಿಯ ಕಿವಿಯಲ್ಲಿ ಮೆಲ್ಲಗೇ) ಇವರು ಹೇಳಿದಂತೆ ಮಾಡಿದ್ರೆ ನಮ್ಮ ಹಿಂದಿನ ದೊರೆಗಳಿಗೆ ಯಾರು ಮರ್ಯಾದೆ ಕೊಡ್ತಾರೆಅಡುಗೆ ಮಾಡಿ ಬಡಿಸಲೂ ಇವರಿಗೆ ಕಾಲಾವಕಾಶ ಕೊಡಬಾರದು.

 

ವ್ಯಕ್ತಿ 2: ಹೌದು.. ಅದಕ್ಕೆಲ್ಲಾ ಕಾಯೋದಿಕ್ಕೆ ಆಗೋದಿಲ್ಲ ರಾಜರೇ. ಈಗಿಂದೀಗಲೇ ಎಲ್ಲರಿಗೂ ಉಚಿತ ಊಟ ಕೊಡಲೇಬೇಕು. ನಾವು ರಾಜ್ಯಾದ್ಯಂತ ಧರಣಿ ಸತ್ಯಾಗ್ರಹ ಮಾಡುತ್ತೇವೆ. ಅಸಹಕಾರ ಚಳುವಳಿ ಮಾಡಲು ಜನರಿಗೆ ಕರೆ ಕೊಡುತ್ತೇವೆ

 

ಹಿರಿಯ ವ್ಯಕ್ತಿ : ಅಲ್ರಯ್ತಾ, ಕೊಡೋದಿಲ್ಲ ಅಂದಾಗ ನಿಮ್ಮ ವಿರೋಧ ಸೂಕ್ತ. ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಕ್ಕೆ ಬೇಕಾದ ತಯಾರಿಗೆ ಸ್ವಲ್ಪ ಸಮಯ ಕೇಳಿದ್ರೆ ಯಾಕೆ ಹೀಗೆ ಮೈಮೇಲೆ ದೆವ್ವ ಬಡಿದವರಂತೆ ಆಡ್ತಿದ್ದೀರಿ. ನಡೀರಿ ಹೊಗೋಣ. ಸ್ವಲ್ಪ ದಿನ ಕಾಯೋಣ.

 

ವ್ಯಕ್ತಿ  1 ಅದೆಲ್ಲಾ ಆಗೋದಿಲ್ಲ ಯಜಮಾನ್ರೆ.. ಹೇಳಿದ್ದಾರೆ ಅಂದ್ಮೇಲೆ ಕೊಡಲೇ ಬೇಕು. ಈಗಲೇ ಕೊಡಬೇಕು.

 

ವ್ಯಕ್ತಿ 2 : ಉಚಿತ ಊಟ ಬೇಕೆ ಬೇಕು. ಈಗಲೇ ಬೇಕು.

 

ವ್ಯಕ್ತಿ 1 : ವಚನಭ್ರಷ್ಟ ರಾಜರಿಗೆ

 

ಎಲ್ಲರೂ : ಧಿಕ್ಕಾರ.

 

ವ್ಯಕ್ತಿ 2 : ಉಚಿತ ಊಟ ಕೊಡದ ಪ್ರಭುತ್ವಕ್ಕೆ

 

ಎಲ್ಲರೂ : ಧಿಕ್ಕಾರ

 

ವ್ಯಕ್ತಿ 1: ನಡೀರೋ ಇಲ್ಲೇನು ಮಾತು. ಬೀದಿಯಲ್ಲಿ ಕುಳಿತು ಧರಣಿ ಮಾಡೋಣ. ( ಎಲ್ಲರೂ ಧಿಕ್ಕಾರ ಕೂಗುತ್ತಾ ಹೋಗುವರು

 

ಮಂತ್ರಿ : ದೊರೆಗಳು ಈಗಲಾದರೂ ಅಪ್ಪಣೆ ಕೊಟ್ಟರೆ ರಾಜದ್ರೋಹಿಗಳ ಹಡೆಮುರಿ ಕಟ್ಟಿ ಕತ್ತಲ ಕೋಣೆಗೆ ತಳ್ಳಿಸುವೆ.

 

ರಾಜ : ಸಹನೆ ಇರಲಿ. ಜನರಿಂದ ಪಡೆದಿದ್ದನ್ನ ಜನರಿಗೆ ಹಂಚುವುದೇ ಪ್ರಭುತ್ವದ ಕಾಯಕ ಅಲ್ಲವೇ? ಒಳಿತು ಮಾಡುವಾಗ ಇಂತಹ ಅಪಸ್ವರಗಳು ಸಹಜ. ನಾನು ಹೇಳಿದ್ದನ್ನು ಮರೆಯಬೇಡಿ ಅಮಾತ್ಯರೇ. ದ್ವೇಷದ ಮಾರುಕಟ್ಟೆಯಲ್ಲಿ ಉಚಿತವಾಗಿ ಪ್ರೀತಿ ಹಂಚುವ ಅಂಗಡಿ ತೆರೆಯೋಣ. ಖಚಿತವಾಗಿ ಜನರ ಶ್ರಮದ ಫಲವನ್ನು ಜನರಿಗೆ ತಲುಪಿಸೋಣ.

 

(ಹೊರಗೆ ತಮಟೆ ಸದ್ದು ಜೋರಾಗುವುದು. ನಾಯಿಗಳ ಬೊಗಳಿಕೆ ಅತಿಯಾಗುವುದು, ಧಿಕ್ಕಾರದ ದ್ವನಿಗಳೂ ಕೇಳಿಬರುವುದು)

 

*- ಶಶಿಕಾಂತ ಯಡಹಳ್ಳಿ*

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ