ಕಾಪಾಡು ಭಗವಂತಾ (ಪ್ರಹಸನ-7)

ಕಾಪಾಡು ಭಗವಂತಾ

(ಇನ್ನೇನು ಅಸೆಂಬ್ಲಿ ಚುನಾವಣೆಯ ಮತ ಎಣಿಕೆ ಶುರುವಾಗಬೇಕಿತ್ತು. ಆಯಾ ಪಕ್ಷಗಳ ಮುಖಂಡರುಗಳು ಬೆಳಿಗ್ಗೆ 5 ಕ್ಕೆ ಎದ್ದು ತಣ್ಣೀರಲ್ಲಿ ಸ್ನಾನ ಮಾಡಿ ತರಾವರಿ ಪೂಜೆ ಮಾಡಿ ಭಗವಂತನಲ್ಲಿ ಬೇಡಿಕೊಳ್ಳತೊಡಗಿದರು)

ಕಮಲನಾಯಕ : ಶ್ರೀರಾಮ ದೇವರೇ.. ನಿನ್ನನ್ನೇ ನಂಬಿದ್ದೇವೆ. ಹೇಗಾದರೂ ಮಾಡಿ ಮ್ಯಾಜಿಕ್ ನಂಬರ್ ಗಡಿ ದಾಟಿಸಿ ಬಹುಮತ ಕೊಡು ಪರಮಾತ್ಮಾ. ಎಕ್ಸಿಟ್ ಪೋಲ್ ರಿಪೋರ್ಟಗಳನ್ನು ಸುಳ್ಳಾಗಿಸು ತಂದೆ. ಇಷ್ಟಕ್ಕೂ ನಮ್ಮ ಪಕ್ಷ ಮಾಡೋದೆಲ್ಲಾ ಧರ್ಮರಕ್ಷಣೆಗಾಗಿ ಅಲ್ಲವೇ. ಅದಕ್ಕಾಗಿ ಎಷ್ಟೊಂದು ಸುಳ್ಳು ಹೇಳಿದ್ದೇವೆ, ಬೆಂಕಿ ಹಚ್ಚಿದ್ದೇವೆ, ಮನಸುಗಳನ್ನು ಒಡೆದಿದ್ದೇವೆ. ಜಾತಿಗರ ವಿಭಜಿಸಿದ್ದೇವೆ, ಪಕ್ಷಗಳ ಒಡೆದಿದ್ದೇವೆ, ಭ್ರಷ್ಟಾಚಾರ ಮಾಡಿದ್ದೇವೆಯೆಂಬುದೆಲ್ಲಾ ನಿಜ. ಆದರೆ ಇದನ್ನೆಲ್ಲಾ ಮಾಡಿದ್ದು ಮಾಡುತ್ತಿರೋದು ಮುಂದೆ ಮಾಡೋದು ಯಾರಿಗೋಸ್ಕರ? ಧರ್ಮಕ್ಕೋಸ್ಕರ ಅಲ್ಲವೇಧರ್ಮರಕ್ಷಕರನ್ನು ರಕ್ಷಿಸಬೇಕಾದದ್ದು ನಿನ್ನ ಕರ್ತವ್ಯ ತಾನೆಇಲ್ಲವಾದರೆ ಮತ್ತೆ ನಾವು ರಿಸಾಲ್ಟ್ ರಾಜಕೀಯ, ಶಾಸಕರ ಖರೀದಿ, ಆಪರೇಶನ್ನು ಶುರುಮಾಡಬೇಕಾಗುತ್ತದೆಏನಾದರೂ ಮಾಡಿ ನಮ್ಮ ಪಕ್ಷಕ್ಕೆ ಲೀಡ್ ಬರುವಂತೆ ಮಾಡು ಭಗವಂತಾ. ನಿನ್ನನ್ನೇ ನಂಬಿದ್ದೇವೆ ಬಹುಮತ ಸಿಕ್ಕುತ್ತೆ ಅಂತಾ. ಜೈ ಜೈ ರಾಮ್, ಸೀತಾರಾಂ ( ಎಂದು ಭಜನೆ ಶುರುಮಾಡ್ತಾನೆ

 

*ಹಸ್ತಾಧಿಪತಿ* : ಅಡ್ಡಬಿದ್ದೆ ಭಗವಂತಾ. ನಮ್ಮ ಪಕ್ಷಕ್ಕೆ ಬಹುಮತ ಕೊಡು ತಂದೆ. ನಮ್ಮ ಕೈಮೀರಿದ ಗ್ಯಾರಂಟಿಗಳನ್ನ ಕೊಟ್ಟಿದ್ದೇವೆ. ಆಗ ಕೂಡಿಟ್ಟ ಗಂಟನ್ನು ಈಗ ಕರಗಿಸಿಕೊಂಡಿದ್ದೇವೆಖರ್ಚು ಮಾಡಿದ್ದನ್ನು ಮತ್ತೆ ಗಳಿಸಲು ಅವಕಾಶ ಕೊಡು ದೇವರೇ. ಅಧಿಕಾರಕ್ಕೆ ಬರಲು ಅಡ್ಡದಾರಿ ಗಿಡ್ಡದಾರಿ ಉದ್ದದಾರಿಗಳೆಲ್ಲವನ್ನೂ ಬಳಸಿದ್ದೇವೆ. ಸಮರದಲಿ ಇದೆಲ್ಲಾ ಮಾಮೂಲು ಅಲ್ಲವೇ? ಎಲ್ಲವನ್ನೂ ಮನ್ನಿಸಿ ಆಶೀರ್ವಾದ ಮಾಡಿ ಬಹುಮತ ಕೊಡು ಪರಶಿವನೇ. ಇಲ್ಲದೇ ಹೋದರೆ ಮತ್ತೆ ಅನೈತಿಕ ಮೈತ್ರಿಗೆ ಮುಂದಾಗಿ ಮುಂದೆ ನಾವು ತೊಂದರೆ ಅನುಭವಿಸಬೇಕಾಗುತ್ತದೆ. ನಿನ್ನನ್ನೇ ನಂಬಿದ್ದೇನೆ  ಕೃಪೆ ತೋರು ತಂದೆ

 

*ತೆನೆಹೊತ್ತವಳ ಅಧಿನಾಯಕ* : ಕಲಿ ಕಾಲಬೈರವೇಶ್ವರಾ ನೀನೇ ನಮಗೀಗ ದಾರಿ ದಿಕ್ಕು. ಹಿಂದೆಯಲ್ಲಾ ಹಿಂಬಾಗಿಲು ತೆಗೆದು ಅಧಿಕಾರ ಕೊಟ್ಟು ಕಾಪಾಡಿದವನು ನೀನು. ಸಲವೂ ಸಹ ಬೇರೆ ಯಾವ ಪಕ್ಷಕ್ಕೂ ಬಹುಮತ ಬರದಂತೆ ಮಾಡು ನನ್ನಪ್ಪಾ. ಕಾಸಿಲ್ಲದೇ ಮತದಾರರ ಆಸೆಗಳೆಲ್ಲವ ಈಡೇರಿಸಲಾಗದೇ ಚುನಾವಣೆಯಲಿ ಗೆಲ್ಲಲಾರೆ, ನಿನ್ನ ಕೃಪೆಯಿಂದ ಏನೋ ಒಂದಿಷ್ಟು ಸೀಟು ಸಿಗಬಹುದು. ಅವುಗಳನ್ನೇ ಇಟ್ಟುಕೊಂಡು ಆಟ ಶುರುಮಾಡಿ ಆಡಳಿತದ ಚುಕ್ಕಾಣಿ ಹಿಡಿಯುವೆ. ಹಂಗ್ ಅಸೆಂಬ್ಲಿ ಮಾಡುವ ಜವಾಬ್ದಾರಿ ನಿನ್ನದು. ಮುಂದಿನ ಚದುರಂಗದಾಟ ನನ್ನದು. ನಾವು ಹರಿಸಿದ ಕಣ್ಣೀರಿಗೆ, ನಮ್ಮ ಕುಟುಂಬ ಇಳಿಸಿದ ಬೆವರಿಗೆ ಪ್ರತಿಫಲ ಬೇಡವೇ ತಂದೆ. ಅತಂತ್ರ ಫಲಿತಾಂಶ ಕರುಣಿಸು ದೇವರೆ. ಜೈ ಕಾಲಭೈರವ, ಜೈ ಜೈ ಕಾಲಬೈರವ.

 

*ಪಕ್ಷೇತರ* : ಅಡ್ಡ ಬಿದ್ದೆ ದೇವರೇ. ನಿನ್ನನ್ನೇ ನಂಬಿ ಚುನಾವಣೆಗೆ ನಿಂತು ಇದ್ದಿದ್ದನ್ನೆಲ್ಲಾ ಇನ್ವೆಸ್ಟ್ ಮಾಡಿದ್ದೇನೆ. ಮತ್ತೆ ನೂರಾರು ಪಟ್ಟು ಗಳಿಸಬೇಕೆಂದರೆ ಯಾವುದಾದರೂ ಪಕ್ಷ ಮ್ಯಾಜಿಕ್ ನಂಬರ ಮುಟ್ಟಲು ಒಂದೆರಡು ಸೀಟು ಕೊರತೆ ಬರುವಂತೆ ಮಾಡು ಭಗವಂತಾ. ಹಾಗಾದಾಗ ನನಗೂ ಡಿಮ್ಯಾಂಡು ಹೆಚ್ಚಾಗುತ್ತೆ, ಮಂತ್ರಿಗಿರಿ ಸಿಗುತ್ತೆ, ಕೇಳಿದಷ್ಟು ಅನುದಾನ, ಎಲೆಕ್ಷನ್ ಖರ್ಚು ರಿಕವರಿ ಎಲ್ಲಾ ಆಗುತ್ತೆ. ದಯವಿಟ್ಟು ದಯೆತೋರಿ ನನ್ನ ಬೇಡಿಕೆ ಈಡೇರಿಸು ದೇವಾ. ಇರುವಷ್ಟು ಕಾಲ ನಿನ್ನ ಸ್ಮರಣೆ ಮಾಡಿಕೊಂಡಿರುತ್ತದೆ ಜೀವಾ.

 

*ಮತದಾರ* : ಭಗವಂತಾ ನಮ್ಮ ಬೇಡಿಕೆ ಇಷ್ಟೇ. ಯಾವುದಾದರೂ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತ ಬರುವಂತೆ ಮಾಡು. ಇಲ್ಲವಾದರೆ ಖುರ್ಚಿಗಾಗಿ ಪಕ್ಷಗಳು ಮಾಡುವ ಸರ್ಕಸ್ ನೋಡೋಕಾಗೋದಿಲ್ಲ. ಎಲ್ಲರೂ ಹಣ ಹಂಚಿದ್ದಾರೆ, ನಮ್ಮಲ್ಲೂ ಒಂದಿಷ್ಟು ಜನ ಕಾಸು ಇಸ್ಕೊಂಡಿದ್ದಾರೆ. ನಮ್ಮಿಂದಲೇ ಲೂಟಿ ಹೊಡೆದ ಹಣದಲ್ಲಿ ನಮಗೊಂದಿಷ್ಟು ಕೊಟ್ಟಿದ್ದಾರೆ ಅಂದುಕೊಂಡಿದ್ದೇವೆ. ತಪ್ಪಾಗಿದ್ದರೆ ಕ್ಷಮಿಸು, ಸದೃಢ ಬಹುಮತದ ಸರಕಾರ ಬರುವಂತೆ ಕರುಣಿಸು ತಂದೆ. ನಿಲ್ಲಲಿ ರಾಜಕೀಯ ಕುತಂತ್ರದ ದಂದೆ.

 

*ದೇವರು* : (ಏಕಕಾಲಕ್ಕೆ ಅಶರೀರವಾಣಿ ಮೂಲಕ ಇವರಿಗೆಲ್ಲಾ ಸಂದೇಶ ತಲುಪಿಸುತ್ತಾನೆ)

 ಭಕ್ತರೆ, ನಿಮ್ಮೆಲ್ಲರ ಭಕ್ತಿಗೆ ಮೆಚ್ಚಿದ್ದೇನೆ, ನಿಮ್ಮ ಕೋರಿಕೆ ಕೇಳಿ ಬೆಚ್ಚಿಬಿದ್ದಿದ್ದೇನೆ. ನೀವು ನಿಮ್ಮ ಸ್ವಾರ್ಥಕ್ಕೆ ಮಾಡುವ ಅಕ್ರಮ ಅನಾಚಾರಕ್ಕೆ ನನ್ನನ್ನೇಕೆ ಭಾಗಿದಾರನನ್ನಾಗಿಸುತ್ತೀರಿ. ಧರ್ಮದ ಹೆಸರಲ್ಲಿ ನನ್ನ ಹೆಸರನ್ನೇಕೆ ಹಾಳುಗೆಡುವುತ್ತೀರಿನಿಮಗೆ ಹಿಂದೆ ಅಧಿಕಾರ ಸಿಕ್ಕಾಗ ಭ್ರಷ್ಟರಾಗದೇ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದರೆ ಈಗ ಹೀಗೆ ನನ್ನ ಮುಂದೆ ಕಾಡಿ ಬೇಡಿಕೊಳ್ಳುವ ದುಸ್ಥಿತಿಯೇ ಬರುತ್ತಿರಲಿಲ್ಲ. ಮತದಾರ ದೇವರುಗಳೇ ಆಶೀರ್ವಾದ ಮಾಡಿ ಆರಿಸಿ ಕಳಿಸುತ್ತಿದ್ದರು. ಆದರೆ ಸಿಕ್ಕ ಅವಕಾಶವನ್ನು ಪರಸ್ಪರ ಕಿತ್ತಾಡಲು, ಸಿಕ್ಕಷ್ಟು ಬಾಚಿಕೊಳ್ಳಲು, ಜನರನ್ನು ಶೋಷಿಸಲು, ಯೋಜನೆಗಳ ಹೆಸರಲ್ಲಿ ಪರ್ಸಂಟೇಜ್ ಲೂಟಿ ಮಾಡಲು ಬಳಸಿಕೊಂಡ ನಿಮಗೆ ಕ್ಷಮೆ ಎಂಬುದಿಲ್ಲ. ಹೋಗಿ ನೀವು ಮಾಡಿದ ಕರ್ಮ ನೀವೇ ಅನುಭವಿಸಿ. ನೋಟಿಗೆ ಓಟು ಮಾರಿಕೊಂಡ ತಪ್ಪಿಗೆ, ಭ್ರಷ್ಟರನ್ನು ಆಯ್ಕೆ ಮಾಡಿದ ಅಪರಾಧಕ್ಕೆ, ಓಟೇ ಮಾಡದೇ ಮನೇಲಿ ಕುಳಿತ ನಿಷ್ಕ್ರೀಯತೆಗೆ ಜನರೂ ದುಸ್ಥಿತಿಯನ್ನು ಅನುಭವಿಸುವುದು ಖಂಡಿತ. ನೀವೇ ಮಾಡಿಕೊಂಡ ತಪ್ಪುಗಳಿಗೆ ದೇವರಾದ ನಾನೇನೂ ಮಾಡಲು ಸಾಧ್ಯವಿಲ್ಲ. ಅನುಭವಿಸಿ, ನೀವೆಲ್ಲಾ ಹೊತ್ತುಕೊಂಡ ತಪ್ಪಿನ ಭಾರವನ್ನು ಹೊರಲು ಸಿದ್ದರಾಗಿನಿಮ್ಮೆಲ್ಲರಲ್ಲೂ ನನ್ನದು ಒಂದೇ ಕೋರಿಕೆ ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ತೊಲಗಿ..

 

-ಶಶಿಕಾಂತ ಯಡಹಳ್ಳಿ

 

(2023, ಮೇ 10 ರಂದು ನಡೆದ ಚುನಾವಣೆಯ ಸೋಲು ಗೆಲುವಿಗಾಗಿ ಭಗವಂತನನ್ನು ಪರಿಪರಿಯಾಗಿ ಬೇಡಿಕೊಳ್ಳುವ. ರಾಜಕೀಯ ವಿಡಂಬನಾತ್ಮಕ ಪ್ರಹಸನವಿದು.)

 

  

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ