ಭಕ್ತಾಂಧರಿಗೆ ಸನ್ಮತಿ ಕೊಡು ರಾಮಾ (ಪ್ರಹಸನ - 71)
ಭಕ್ತಾಂಧರಿಗೆ ಸನ್ಮತಿ ಕೊಡು ರಾಮಾ
(ಮಾಧ್ಯಮದ ಕ್ಯಾಮರಾ ಮುಂದೆ ಭಕ್ತರು ರಾಮಮಂದಿರ ಕುರಿತು ಹೇಳುತ್ತಿದ್ದಾರೆ)
ಭಕ್ತ 1 : ಪ್ರಾಣ ಪ್ರತಿಷ್ಠಾಪನೆಗೆ ಬರಲು ನಿರಾಕರಿಸಿದ ಕಾಂಗ್ರೆಸ್ಸಿನವರು ರಾಮದ್ರೋಹಿಗಳು.
ಪತ್ರಕರ್ತ : ಆಮೇಲೆ.
ಭಕ್ತ 2 : ಹಿಂದೂ ಹೃದಯ ಸಿಂಹಾಸನಾಧೀಶ್ವರ ಶ್ರೀರಾಮ ಮಂದಿರದ ವಿರೋಧಿಗಳೆಲ್ಲಾ ಧರ್ಮದ್ರೋಹಿಗಳು.
ಪತ್ರಕರ್ತ : ಸರಿ ಆಮೇಲೆ.
ಭಕ್ತ 3 : ಇದು ಹಿಂದೂರಾಷ್ಟ್ರ. ರಾಮನೇ ಸಾರ್ವಭೌಮ. ವಿಶ್ವಗುರುವಿನ ಇಷ್ಟದೈವ ರಾಮ. ಇದನ್ನು ವಿರೋಧಿಸುವವರೆಲ್ಲಾ ರಾಷ್ಟ್ರದ್ರೋಹಿಗಳು.
ಪತ್ರಕರ್ತ : ಹೌದಾ..ಅಪೂರ್ಣವಾದ ರಾಮಮಂದಿರ ಉದ್ಘಾಟನೆ ಬೇಡವೆಂದವರು, ಶಾಸ್ತ್ರಸಮ್ಮತವಲ್ಲದ ಆಚರಣೆ ವಿರೋಧಿಸುವವರು, ಚುನಾವಣಾ ಪ್ರಚಾರವಾಗಿ ರಾಮಮಂದಿರ ಬಳಕೆಯಾಗುವುದನ್ನು ಖಂಡಿಸುವವರೆಲ್ಲಾ ರಾಮದ್ವೇಷಿಗಳು, ಧರ್ಮದ್ರೋಹಿಗಳು, ದೇಶದ್ರೋಹಿಗಳು ಹೌದಲ್ವಾ.
ಭಕ್ತ 1 : ಹೌದು. ಅಂತವರನ್ನೆಲ್ಲಾ ದೇಶದಿಂದಲೇ ಹೊರಗೆ ಹಾಕಬೇಕು.
ಪತ್ರಕರ್ತ : ಹಾಗಾದರೆ ರಾಮಮಂದಿರದ ಉದ್ಘಾಟನೆಯನ್ನು ವಿರೋಧಿಸಿದ ಶಂಕರಾಚಾರ್ಯ ಪೀಠಗಳ ಮಠಾಧಿಪತಿಗಳನ್ನು ಏನು ಮಾಡಬೇಕು?
ಭಕ್ತ 2 : ಜೈ ಶ್ರೀರಾಮ
ಪತ್ರಕರ್ತ : ಪ್ರತಿರೋಧ ತೋರುತ್ತಿರುವ ನಿರ್ಮೋಹಿ ಅಖಾಡದವರನ್ನು ಎಲ್ಲಿಗೆ ಓಡಿಸಬೇಕು.
ಭಕ್ತ 3 : ಜೈ ಶ್ರೀರಾಮ್.
ಪತ್ರಕರ್ತ : ಸ್ವಾರ್ಥಕ್ಕಾಗಿ ಪ್ರಚಾರಕ್ಕಾಗಿ ದೇವರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಖಂಡಿಸುತ್ತಿರುವ ಹಿಂದೂ ಮಹಾಸಭಾದವರನ್ನು ಯಾವಾಗ ದೇಶಭ್ರಷ್ಟರನ್ನಾಗಿಸಬೇಕು.
ಭಕ್ತ 1 : ಜೈ ಜೈ ಶ್ರೀರಾಮ.
ಪತ್ರಕರ್ತ : ಈ ಪೂಜಾ ಪ್ರಹಸನವನ್ನು ಒಪ್ಪದೇ ಇರುವ ಇಂತಹ ಸಂಘಪರಿವಾರದ ಹಿಂದುತ್ವವಾದಿ ಧರ್ಮದ್ರೋಹಿಗಳಿಗೆ ಎಂತಾ ಶಿಕ್ಷೆ ಕೊಡಬೇಕು?
ಭಕ್ತ 1,2,3 : ಬೊಲೋ ಶ್ರೀರಾಮ ಚಂದ್ರಕೀ ಜೈ. ಜೈ ಜೈ ರಾಮ, ಜಾನಕಿ ರಾಮ. ರಾಮ ರಾಮ ಜೈಜೈ ರಾಮ. ( ಜೋರಾಗಿ ಭಜನೆ ಶುರು ಮಾಡುತ್ತಾರೆ. ಪತ್ರಕರ್ತನ ಮಾತುಗಳು ಕೇಳದಂತೆ ಶ್ರೀರಾಮನ ಭಜನೆ ಹಾಡು ಜಾಸ್ತಿಯಾಗುತ್ತದೆ.)
ಪತ್ರಕರ್ತ : ( ಕ್ಯಾಮರಾಮನ್ ಗೆ) ಇವರ ಹಣೇಬರಹಾನೇ ಇಷ್ಟು. ಏ ಆ ಕಡೆ ಕ್ಯಾಮರಾ ಹಿಡಿಯೋ. ಸಂಸದ ಸಿಂಹ ಬಂದಿದ್ದಾರೆ.
ಪತ್ರಕರ್ತ : ಸರ ಸರ್.. ಬಿಜೆಪಿ ನಾಯಕರು ಕರ್ನಾಟಕದ ಬರದ ಬಗ್ಗೆ ಮಾತಾಡದೇ ಬರೀ ರಾಮನ ಬಗ್ಗೆ ಮಾತಾಡ್ತಾ ಇದ್ದಾರಲ್ಲಾ..
ಸಿಂಹ : ಪತ್ರಕರ್ತರಾದ ನೀವೂ ಕೂಡಾ ರಾಮಜನ್ಮಭೂಮಿಗೆ ಸಂಬಂಧಿಸಿದ ಒಳ್ಳೊಳ್ಳೆ ಸುದ್ದಿಗಳನ್ನು ಬಿತ್ತರಿಸಿ.
ಪರ್ತಕರ್ತ : ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನಕ್ಕೆ ಮನವಿ ಕೊಟ್ಟರೂ..
ಸಿಂಹ : ಅಣ್ಣಾ ಒಂದ್ನಿಮಿಷ ಕೇಳಿಸ್ಕೊಳ್ಳಿ. ಮಾಧ್ಯಮಗಳು ರಾಮನ ಸಂದೇಶವನ್ನ, ಅಯೋಧ್ಯಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನ ಎಳೆಎಳೆಯಾಗಿ ಜನರ ಮುಂದಿರಿಸಿದ್ದೀರಿ ಥ್ಯಾಕ್ಯೂ..
ಪತ್ರಕರ್ತ : ಸರ್ ಬರ.. ಅನುದಾನ. ಥೋ ಹೋಗೇ ಬಿಟ್ರಲ್ಲಾ. ಇಂತವರು ಇರುವವರೆಗೂ ಈ ದೇಶವನ್ನು ಆ ರಾಮನೂ ಕಾಪಾಡಲಾರ. ಅಂಧ ಭಕ್ತರಿಗೆ ಸನ್ಮತಿ ಕೊಡು ರಾಮಾ..
( ಹಿನ್ನಲೆಯಲ್ಲಿ ರಾಮನ ಭಜನೆ)
- ಶಶಿಕಾಂತ ಯಡಹಳ್ಳಿ
20-01-2024
Comments
Post a Comment