ಖುರ್ಚಿ ( ಪ್ರಹಸನ-8)

 ಪ್ರಹಸನ-8

ಖುರ್ಚಿ 

****************

 

(ನಡುವೆ ಎತ್ತರದ ಖುರ್ಚಿ. ಎಡಕ್ಕೆ ಶಿವಣ್ಣ, ಬಲಕ್ಕೆ ಸಿದ್ದಣ್ಣ, ಹಿಂದೆ ಮಲ್ಲಣ್ಣ ನಿಂತಿದ್ದಾರೆ)

 

ಶಿವಣ್ಣ : ಸಲ ಖುರ್ಚಿ ನನ್ನದೇ

 

ಸಿದ್ದಣ್ಣ : ನೋ.. ನಂದು ಅಂದ್ರೆ ನಂದೇ

 

ಶಿವಣ್ಣ : ಖುರ್ಚಿಗಾಗಿ ನಾನು ನಿದ್ದೆ ಮಾಡಿಲ್ಲಾ, ನಿದ್ದೆ ಮಾಡೋಕು ಬಿಟ್ಟಿಲ್ಲ, ಎಷ್ಟೊಂದು ತ್ಯಾಗ ಮಾಡಿದ್ದೀನಿ, ಅದಕ್ಕೆ ನಂಗೇ ಬೇಕು ಖುರ್ಚಿ

 

ಸಿದ್ದಣ್ಣ : ಅದೆಂಗಾಯ್ತದೆ. ನಾನು ಮಾಸ್ ಲೀಡರ್. ನನ್ನ ವರ್ಚಸ್ಸೇ ಗೆಲುವಿಗೆ ಕಾರಣ. ಖುರ್ಚಿ ಹಕ್ಕು ನಂದೆ..

 

ಮಲ್ಲಣ್ಣ : ಆಯ್ತು. ಇಡೀ ಖುರ್ಚಿ ನಿಮ್ಮದೇ ಆದರೆ ಇಬ್ಬರೂ ಕೂಡೋಕಾಗೋದಿಲ್ವೇ.. ಬೆಳಿಗ್ಗೆ 6 ರಿಂದ ಸಂಜೆ 6 ವರೆಗೂ ಒಬ್ಬರು ಕೂತ್ಕೊಳ್ಳಿ. ಇನ್ನೊಬ್ಬರು ಸಂಜೆ 6 ರಿಂದ ಬೆಳಿಗ್ಗೆ 6 ವರೆಗೂ ಕೂತ್ಕೊಳ್ಳಿ ಸುಮ್ಕೆ ಯಾಕೆ ಜಗಳ. ಜನ ನೋಡ್ತಿದ್ದಾರೆ.

 

ಸಿದ್ದಣ್ಣ : ಅದೆಂಗಾಗ್ತದೆ ಸರ್. ಐದೂ ವರ್ಷ ಖುರ್ಚಿ ನಂದೇ. ಸುಭದ್ರವಾಗಿ ಕೂಡಬೇಕಲ್ಲವೇ. ಭಾಗ್ಯ ಭಾಗ್ಯ ಕೊಡಬೇಕಲ್ಲವಾ.

 

ಶಿವಣ್ಣ : ನಮಗೂ ಭಾಗ್ಯಾ ಸೌಭಾಗ್ಯ ಎಲ್ಲಾ ಗೊತ್ತು. ಖುರ್ಚಿ ಬೇಕಷ್ಟೇ

 

ಮಲ್ಲಣ್ಣ: ಆಯ್ತು ಶಿವಣ್ಣ. ಖುರ್ಚಿ ಪಕ್ಕದಲ್ಲಿ ಇನ್ನೊಂದು ಖುರ್ಚಿ ಹಾಕಿಸಿ ಕೊಡುವೆ. ಇದಕ್ಕಿಂತಾ ಒಂಚೂರು ಚಿಕ್ಕದು ಅಷ್ಟೇ.. ಪರವಾಗಿಲ್ವಾ..

 

ಶಿವಣ್ಣ : ಸಾಧ್ಯವೇ ಇಲ್ಲ. ನನಗೆ ಇದೇ ಖುರ್ಚಿ ಬೇಕು. ಖುರ್ಚಿ ಕೊಡದೇ ಇದ್ದರೆ ಬೇರೆ ಯಾವ ಖುರ್ಚಿ ಮೇಲೂ ನಾನು ಕೂಡೋದೇ ಇಲ್ಲಾ. ಮಲ್ಕೊಂಡೇ ಇರ್ತೀನಿ ಯಾವ್ ಕೆಲಸಾನೂ ಮಾಡೋದಿಲ್ಲಾ ಅಂದ್ರೆ ಮಾಡೋದಿಲ್ಲಾ.

 

ಮಲ್ಲಣ್ಣ : ಹೆ ಹ್ಹೆಹೆ.. ಅದೆಂಗೆ ಸಾಧ್ಯ ಹೇಳಿ. ನೀವಿಬ್ಬರೂ ನಮ್ಮ ಪಕ್ಷದ ಎರಡು ಕಣ್ಣು ಇದ್ದಂಗೆ. ಯಾರನ್ನೂ ಬಿಡೋ ಹಾಗಿಲ್ಲ. ಈಗೇನು ಮಾಡೋದು?

 

ಸಿದ್ದಣ್ಣ : ಒಂದು ಕೆಲಸಾ ಮಾಡಿ ಸರ್. ಓಪಿನಿಯನ್ ಪೋಲ್ ಮಾಡಿ. ಶಾಸಕರ ಅಭಿಪ್ರಾಯ ಪಡೀರಿ. ಹೆಚ್ಚು ಜನ ಯಾರಿಗೆ ಜೈ ಅಂತಾರೋ ಅವರಿಗೆ ಖುರ್ಚಿ ಕೊಡಿ.

 

ಮಲ್ಲಣ್ಣ : ಒಳ್ಳೆ ಐಡಿಯಾ 

 

ಶಿವಣ್ಣ : ಹೂಂ. ಬಂದ್ಬಿಡಿ. ಇದಕ್ಕೆ ನಾನಂತೂ ಒಪ್ಪೋದಿಲ್ಲ. ನನಗೆ ಖುರ್ಚಿ ಬೇಕು. ( ಖುರ್ಚಿಯ ಬಲದ ಕೈ ಹಿಡಿದು ಎಳೆಯತೊಡಗುತ್ತಾನೆ

 

ಸಿದ್ದಣ್ಣ : ಖುರ್ಚಿ ನನಗೇ ಬೇಕು ( ಖುರ್ಚಿಯ ಎಡ ಕೈ ಹಿಡಿದು ಎಳೆಯುತ್ತಾನೆ. ಖುರ್ಚಿ ಹಿಡಿದು ಹಿಂದೆ ನಿಂತಿದ್ದ ಮಲ್ಲಣ್ಣ  ಖುರ್ಚಿ ಜಗ್ಗಾಟದಲ್ಲಿ ಕೆಳಗೆ ಬೀಳುತ್ತಾನೆ.) 

 

ಶಿವಣ್ಣ : ಈಗಾಗಲೇ ಹಿಂದೆ ಕುರ್ಚಿಯಲ್ಲಿ ಐದು ವರ್ಷ ನೀನು ಕೂತಾಗಿದೆ.. ಈಗ ನನ್ನ ಸರದಿ. ( ತನ್ನತ್ತ ಖುರ್ಚಿ ಎಳೆದುಕೊಳ್ಳುತ್ತಾನೆ

 

ಸಿದ್ದಣ್ಣ : ನೀನಗಿನ್ನೂ ವಯಸ್ಸು ಆಯಸ್ಸು ಇದೆ. ಮುಂದೆ ಯಾವಾಗ ಬೇಕಾದರೂ ಕೂಡಬಹುದು. ನನಗಿದೇ ಕೊನೇ ಚಾನ್ಸು. ಖುರ್ಚಿ ನನಗೇ ಇರಲಿ..( ಖುರ್ಚಿಯನ್ನು ತನ್ನತ್ತ ಎಳೆಯುತ್ತಾನೆ

 

( ಅಷ್ಟರಲ್ಲಿ ಕೇಸರಿ ಶಾಲಿನ ನಾಯಕರು ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದಾರೆ)

 

ಕೇಸರಿ 1 : ಎಳೀರಿ, ಇನ್ನೂ ಜೋರಾಗಿ ಐಸಾ

 

ಕೇಸರಿ 2 : ಇನ್ನೂ ಜೋರಾಗಿ ಎಳೀರಿ.. ಬಿಟ್ರೆ ಸಿಕ್ಕೋದಿಲ್ಲ ಐಸಾ..

 

ಕೇಸರಿ 1 : ಇವರು ಹಿಂಗೇ ಕಿತ್ತಾಡೋದನ್ನ ನೋಡ್ತಿದ್ದರೆ ಎಷ್ಟು ಆನಂದ ಆಗ್ತಿದೆ ಗೊತ್ತಾ.

 

ಕೇಸರಿ 2 : ಲಡ್ಡು ಬಂದು ಬಾಯಿಗೆ ಬಿದ್ದಂಗಾಗ್ತಿದೆ ಗೊತ್ತಾ.

 

ಕೇಸರಿ 1 : ಖುರ್ಚಿ ಹೊಡೆಯಲು ಪ್ಲಾನ್ ಬಿ ಸಿ  ಎಲ್ಲಾ ವ್ಯರ್ಥ ಆದವು.

 

ಕೇಸರಿ 2 : ಈಗ ಡಿ ಪ್ಲಾನ್ ಅಂದ್ರೆ ಡಿವೈಡ್ ಆಂಡ್ ರೂಲ್ ಪ್ಲಾನ್ ಸೆಕ್ಸಸ್ ಆಗೋ ಹಾಗೆ ಕಾಣ್ಸುತ್ತೆ

 

ಕೇಸರಿ 1 : ಮುದುಕ ಹಠಮಾರಿ, ಆಸೆ ಆಮೀಷಕ್ಕೆ ಬಲಿಯಾಗೋದಿಲ್ಲ. ಆದರೆ ಶಿವಣ್ಣ ಇದ್ದಾನಲ್ಲಾ..

 

ಕೇಸರಿ 2 : ಅವನಿಗೆ ಮಹತ್ವಾಕಾಂಕ್ಷೆ ಜಾಸ್ತಿ ಇದೆ. ಅವನನ್ನ ನಮ್ಮ ಕಡೆ ಎಳಕೊಂಡ್ರೆ ಹೆಂಗೆ.

 

ಕೇಸರಿ 1 :  ಕರದ್ರೆ ಬರಬೇಕಲ್ಲಾ. ಹಣದ ಆಸೆ ತೋರಿಸಿದ್ರೆ

 

ಕೇಸರಿ 2 : ಅವನ ಹತ್ರಾನೇ ಇಪ್ಪತ್ತು ತಲೆಮಾರು ಕೂತು ಮಜಾ ಮಾಡೋವಷ್ಟು ಕಾಸಿದೆ.

 

ಕೇಸರಿ 1 : ನಮ್ಮ ಐಟಿ, ಇಡಿ, ಸಿಬಿಐ ಗಳನ್ನೆಲ್ಲಾ ಚೂ ಬಿಟ್ಟು ಹೆದರಿಸಿದ್ರೆ..

 

ಕೇಸರಿ 2 : ಹಾಂ. ಈಗಾಗಲೇ ಅವನ ಮೇಲೆ ಬೇಕಾದಷ್ಟು ಕೇಸ್ ಇದ್ದಾವಲ್ಲಾ ಅವಕ್ಕೇ ಜೀವಾ ಕೊಟ್ಟು ಜೈಲಿಕಳಿಸ್ತೀವಿ ಅಂತಾ ಹೆದರಿಸಿದ್ರೆ ಬಂದೇ ಬರ್ತಾನೆ ಅಲ್ವಾ.. ಖುರ್ಚಿ ತಂದೇ ತರ್ತಾನೆ ಅಲ್ವಾ..

 

ಕೇಸರಿ 1 : ಸರಿಯಾಗಿ ಹೇಳಿದೆ. ಶ್! ಇರು ಅಲ್ಲೇನು ಆಗ್ತಿದೆ ಅಂತಾ ನೊಡೋಣ.

 

ಕೇಸರಿ 2 : ಕಾಯೋಣ ಇನ್ನೂ ಕಾಯೋಣ.. ಅವಕಾಶ ನೋಡ್ಕೊಂಡು ಗಾಳ ಹಾಕೋಣ..

 

ಶಿವಣ್ಣ : ನಂದು ಖುರ್ಚಿ

 

ಸಿದ್ದಣ್ಣ : ಇಲ್ಲಾ ಖುರ್ಚಿ ನಂದು.

 

ಮಲ್ಲಣ್ಣ : ( ಸಾವರಿಸಿ ಎದ್ದು ನಿಟ್ಟುಸಿರು ಬಿಡುತ್ತಾ) ಆತ್ರಪ್ಪಾ. ತಲಾ ಎರಡೂವರೆ ವರ್ಷ ಸರದಿ ಮೇಲೆ ಕೂಡ್ರಪ್ಪಾ..

 

ಶಿವಣ್ಣ : ಹಾಗಾದ್ರೆ ಮೊದಲು ನಾನು ಕೂಡ್ತೇನೆ.

 

ಸಿದ್ದಣ್ಣ : ನನಗೆ ವಯಸ್ಸಾಯ್ತು, ಎಷ್ಟು ದಿನ ಬದುಕಿರ್ತೇನೋ ಗೊತ್ತಿಲ್ಲಾ.. ನಾನೇ ಮೊದಲು ಕೂಡ್ತೇನೆ.

 

( ನಾನು ಮೊದಲು, ಇಲ್ಲಾ ನಾನು ಮೊದಲು ಅಂತಾ ಇಬ್ಬರೂ ಖುರ್ಚಿ ಎಳದಾಡುತ್ತಾರೆ. ಮಲ್ಲಣ್ಣ ಮತ್ತೊಮ್ಮೆ ಕೆಳಗೆ ಬಿದ್ದು ಸಾವರಿಸಿಕೊಂಡು ಎದ್ದು ನಿಂತು

 

ಮಲ್ಲಣ್ಣ : ನಾನು ನಿಮಗಿಂತಾ ದೊಡ್ಡೋನು.ನನ್ನ ಮಾತು ಕೇಳ್ರಿ. ಓಪಿನಿಯನ್ ಪೋಲ್ ಪ್ರಕಾರ ಸಿದ್ದಣ್ಣ ಮೊದಲು ಕೂಡಲಿ. ಎರಡೂವರೆ ವರ್ಷ ಆದ ಮೇಲೆ ಶಿವಣ್ಣ ಕೂತ್ಕೊಳ್ಳಲಿ. ಆಗಬಹುದಾ.. ಆಗಬಹುದಾ ಹೇಳ್ರಪ್ಪಾ. ಇಲ್ಲಾಂದ್ರೆ ಸಮಸ್ಯೆಗೆ ಬೇರೆ ಪರಿಹಾರ ಇಲ್ಲಾ ತಿಳ್ಕೊಳ್ರಿ. ಜನಾ ನಮ್ಮ ಖುರ್ಚಿ ಜಗಳ ನೋಡಿ ನಗ್ತಾ ಇದ್ದಾರೆ ನೋಡಿ,, ಸ್ವಲ್ಪ ಕಿವಿಕೊಟ್ಟಿ ಕೇಳಿ

 

ಶಿವಣ್ಣ : ಆಯ್ತು.. ನಿಮ್ಮ ಮಾತಿಗೆ ಮರ್ಯಾದೆ ಕೊಟ್ಟು ಒಪ್ಪತೇನೆ.. 

 

ಸಿದ್ದಣ್ಣ : ಓಪಿನೀಯನ್ ಪೋಲ್ ನನ್ನಕಡೆ ಐತೆ ಬಿಡು ಖುರ್ಚಿಯಲ್ಲಿ ನಾನೇ ಮೊದಲು ಕೂತ್ಕೊತೇನೆ.

 

( ಸಿದ್ದಣ್ಣ ಖುರ್ಚಿ ಮೇಲೆ ಖುಷಿಯಿಂದಾ ಕೂತು ಎರಡು ಬೆರಳೆತ್ತಿ ಗೆದ್ದಂತೆ ಕೈ ಬೀಸುತ್ತಾರೆ. ಖುರ್ಚಿ ಹಿಂದೆ ಮಲ್ಲಣ್ಣ ನಿಂತ್ಕೋಂಡು 70 ಎಂಎಂ ನಗೆ ಬೀರುತ್ತಾರೆ. ಶಿವಣ್ಣ ಪಕ್ಕದಲ್ಲಿ ಹ್ಯಾಪೆ ಮೋರೆ ಹಾಕಿ ನಿಲ್ಲುತ್ತಾನೆ. ಪೊಟೋಗ್ರಾಫರ್ ಒಬ್ಬ ಬಂದು ಪೋಟೋ ತೆಗೆಯುತ್ತಾನೆ. ಸೀನ್ ಸ್ಟಿಲ್ ಆಗುತ್ತದೆ. ಕೇಸರಿಯವರ ಮಾತು ಮುಂದುವರೆಯುತ್ತದೆ)

 

ಕೇಸರಿ 1 : ಛೇ ಎಂತಾ ಅವಕಾಶ ಮಿಸ್ ಆಯ್ತು.

 

ಕೇಸರಿ 2 : ಬಾಯಿಗೆ ಬಂದ ಲಡ್ಡು ಬೀದಿಗೆ ಬಿದ್ದಂಗಾಯ್ತು. ಏನ್ ಮಾಡೋದು.

 

ಕೇಸರಿ 1 : ಮಾಡೋದೇನು? ( ಇಬ್ಬರೂ ಚಿಂತಾಕ್ರಾಂತರಾಗಿ ಶತಪತ ತಿರುಗುತ್ತಾರೆ

 

ಕೇಸರಿ 2 : ಹಾಂ.. ಹೀಗೆ ಮಾಡಿದ್ರೆ ಹೆಂಗೆ.. ರಾಜ್ಯಾದ್ಯಂತ ಧರ್ಮದ ಹೆಸರಲ್ಲಿ ದಂಗೆ ಎಬ್ಬಿಸಿದರೆ ಹೆಂಗೆ.

 

ಕೇಸರಿ 1 : ಬೆಂಕಿ ಹಚ್ಚಿ ಒಂದಿಷ್ಟು ಹೆಣ ಬೀಳಿಸಿ ಶಾಂತಿ ಹಾಳು ಮಾಡಿದ್ರೆ ಹೆಂಗೆ.

 

ಕೇಸರಿ 2 : ಅಲ್ಲಲ್ಲಿ ಬಾಂಬಿಟ್ಟು ಜನರನ್ನ ಸಾಯಿಸಿ ಆತಂಕವಾದಿ ಗಳ ದುಷ್ಕೃತ್ಯ ಅಂತಾ ಅಪಪ್ರಚಾರ ಮಾಡಿದ್ರೆ ಹೆಂಗೆ..

 

ಕೇಸರಿ 1 : ಅಯ್ಯೋ ನಮ್ಮ ಧರ್ಮ ಅಪಾಯದಲ್ಲಿದೆ ಅಂತಾ ಬಾಯಿಬಡಿದುಕೊಂಡು ಜಾತಿ ಧರ್ಮಗಳ ನಡುವೆ ಜಗಳ ಹಚ್ಚಿ ಕೊಲೆ ಸುಲಿಗೆ ಮಾಡಿಸಿ ರಾಜ್ಯಕ್ಕೆ ರಾಜ್ಯವೇ ಹೊತ್ತಿ ಉರಿವಂತೆ ಮಾಡಿದ್ರೆ ಹೆಂಗೆ..

 

ಕೇಸರಿ 2 : ಇದನ್ನೆಲ್ಲಾ ನಮಗೆ ಹೇಳಿಕೊಡಬೇಕಾ. ಆದರೆ ಇಂತಾದನ್ನೆಲ್ಲಾ ಮಾಡಿದ್ರೆ ಖುರ್ಚಿ ನಮಗೆ ಖಂಡಿತಾ ದಕ್ಕುತ್ತಾ.

 

ಕೇಸರಿ 1  : ದಕ್ಕೇ ದಕ್ಕುತ್ತೆ. ಕಾನೂನು ಸುವ್ಯವಸ್ಥೆ ತುಂಬಾ ಹಾಳಾಗಿದೆ ಅಂತಾ ರಾಷ್ಟ್ರಪತಿ ಆಡಳಿತ ಹೇರೋದು. ಜನರ ದಂಗೆ ಹೆಚ್ಚು ಮಾಡೋದು. ಇವರು ಖುರ್ಚಿಯಲ್ಲಿ ಕೂತರೆ ಹಿಂಗೆ ಹಿಂಗಿಗೆ ದಂಗೆ ಆಗ್ತವೆ ಅಂತಾ ಜನರನ್ನ ನಂಬಿಸೋದು.

 

ಕೇಸರಿ 2 : ಸತತ ಗಲಭೆ ಹಿಂಸೆ ದೊಂಬಿ ದಂಗೆಗಳಿಂದ ಜನ ಬೇಸತ್ತಿರ್ತಾರಲ್ಲಾ ಆಗ ಮತ್ತೆ ಚುನಾವಣೆ ಘೋಷಿಸೋದು. ಆಗ ನೋಡು ಜನರೇ ಖುರ್ಚಿಯನ್ನ ತಲೆ ಮೇಲೆ ಹೊತ್ಕೊಂಡು ಬಂದು ನಮಗೆ ಕೊಡ್ತಾರೆ..

 

ಕೇಸರಿ 1 : ಸೂಪರ್ ಐಡಿಯಾ. ನಮ್ಮಿಂದಾ ಖುರ್ಚಿ ಕಿತ್ಕೊಂಡ್ರೆ ನಾವು ಸುಮ್ಮನೆ ಬಿಡ್ತೀವಾ? ನಮ್ಮ ತಾಕತ್ತೇನು, ನಮ್ಮ ದಮ್ ಎಂತಾದ್ದು..

 

ಕೇಸರಿ 2 : ಹೆಂಗಾದ್ರೂ ಮಾಡಿ ವಾಪಸ್ ಕಿತ್ಕೊಂಡೇ ಕಿತ್ಕೋತೀವಿ.. ಬಿಡ್ತೀವಾ..

 

ಕೇಸರಿ 1 : ನಾವಂದ್ರೆ ಯಾರು

 

ಕೇಸರಿ 2 :  ಸನಾತನ ಧರ್ಮ ರಕ್ಷಕರು

 

ಕೇಸರಿ 1 : ನಾವಂದ್ರೆ ಯಾರು?

 

ಕೇಸರಿ 2 : ಸಂವಿಧಾನ ಬದಲಾಯಸಲೆಂದೇ ಬಂದವರು..

 

ಕೇಸರಿ 1 & 2 : ನಾವಂದ್ರೆ  ನಾವೇ..

 

( ಇಬ್ಬರೂ ಗಹಗಹಿಸಿ ನಗುತ್ತಾರೆ.) 

 

ಹಾಡು

 

ಒಡೆದು ಆಳುವ ಕುಳಗಳು

ಕುತಂತ್ರದಿ ದಾಳ ಉರುಳಿಸುವ ಕಲಿಗಳು

ಸುತ್ತಲೂ ಇದ್ದಾರೆ ಎಚ್ಚರಿಕೆ.. ಎಚ್ಚರಿಕೆ

 

ಸಿಕ್ಕ ಅವಕಾಶ ಬಿಡಬೇಡಿ ಕಿತ್ತಾಡಿ

ದುಷ್ಟ ಶಕ್ತಿಗಳ ನಾಶಕ್ಕೆ ಜೊತೆಗೂಡಿ

 

ಜನರ ನಂಬಿಕೆ ಉಳಿಸಲಿ ಖುರ್ಚಿ

ಬಡವರ ಬವನೆ ಕಳೆಯಲಿ ಖುರ್ಚಿ

ಅಭಿವೃದ್ದಿ ಕಾರ್ಯಕೆ ಬಳಸಿರಿ ಖುರ್ಚಿ

 

ಎಚ್ಚರ ಎಚ್ಚರ ಖುರ್ಚಿ ಕಳ್ಳರಿದ್ದಾರೆ ಎಚ್ಚರ..

ಖುರ್ಚಿಗಾಗಿ ಕಿತ್ತಾಡಿದರೆ

ಜನರೇ ಖುರ್ಚಿ ಕಿತ್ಕೊಂಡಾರು ಎಚ್ಚರ

 

- ಶಶಿಕಾಂತ ಯಡಹಳ್ಳಿ

 

(2023, ಮೇ 10 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಯಾರು ಸಿಎಂ ಆಗಬೇಕು ಎನ್ನುವ ಮೇಲಾಟ ಹಾಗೂ ಪರಿಸ್ಥಿತಿಯ ಲಾಭವನ್ನು ಗಳಿಸಲು ಬಿಜೆಪಿಗರು ಅವಕಾಶಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಬರೆದ ರಾಜಕೀಯ ವಿಡಂಬನಾತ್ಮಕ ಪ್ರಹಸನವಿದು.)

 

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ