ಪಾಸಾಗೋವ್ರು ಫೇಲಾಗವ್ರೆ ಹೊಡಿ ಒಂಬತ್ ( ಪ್ರಹಸನ-5)

 ಪ್ರಹಸನ-5

ಪಾಸಾಗೋವ್ರು ಫೇಲಾಗವ್ರೆ ಹೊಡಿ ಒಂಬತ್     



ಪತ್ರಕರ್ತ : ಅರೆರೆ ಯಾಕ್ರೀ ಸರ್ ಹಿಂಗಾಯ್ತು. ಎಸ್ಸೆಸ್ಸೆಲ್ಸಿ ರಿಸಲ್ಟು ಉಲ್ಟಾ ಹೊಡೀತು. 

ಭಕ್ತಾಸುರ : ಏನ್ ಏನಾಯ್ತೀಗ?

ಪತ್ರಕರ್ತ : ಮತ್ತೇನಾಗಬೇಕು. ಯಾವಾಗಲೂ ಎಸ್ಸೆಸ್ಸೆಲ್ಸಿ ರಿಜಲ್ಟಲ್ಲಿ ಟಾಪ್ ಇರಬೇಕಾಗಿದ್ದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಈಗ 18, 19 ನೇ ಸ್ಥಾನಕ್ಕಿಳಿದಿವೆ. ಬುದ್ದಿವಂತರ ನಾಡಲ್ಲಿ ಹಿಂಗಾದ್ರೆ ಹೆಂಗೆ..

ಭಕ್ತಾಸುರ : ಹೆಂಗೆ ಅಂದ್ರೆ.. ಒಳ್ಳೇದೇ ಆಯ್ತು ಬಿಡ್ರಿ. ರಿಸಲ್ಟ್ ಮುಖ್ಯಾನೋ ಇಲ್ಲಾ ಧರ್ಮ ಮುಖ್ಯಾನೋ? ನಮಗೆ ಹಿಜಾಬು ಹಲಾಲು ಆಜಾನು ಗಳನ್ನು ವಿರೋಧಿಸೋದು ಮುಖ್ಯ. ಪೇಲಾದವ್ರೆಲ್ಲಾ ದೇಶಪ್ರೇಮಿಗಳು. ಧರ್ಮಕ್ಕಾಗಿ ಓದನ್ನೇ ತ್ಯಾಗ ಮಾಡಿದ ವೀರರು. ಅಂತವರಿಗೆ ಸನ್ಮಾನ ಮಾಡಿ ತ್ರಿಶೂಲ ದೀಕ್ಷೆ ಕೊಡ್ತೀವಿ.

ಪತ್ರಕರ್ತ : ಬುದ್ದಿವಂತರ ನಾಡಲ್ಲಿ ಹಿಂಗಾದ್ರೆ..?

ಭಕ್ತಾಸುರ: ಬುದ್ದಿ ಮುಖ್ಯಾನೋ ಇಲ್ಲಾ ಸುದ್ದಿ ಆಗೋದು ಮುಖ್ಯಾನೋ. ನಮ್ಮ ಬುದ್ದಿವಂತರೆಲ್ಲಾ ಈಗ ಧರ್ಮ ಉಳಿಸಲು ತಮ್ಮ ಬುದ್ದಿನೆಲ್ಲಾ ಖರ್ಚು ಮಾಡ್ತಾವ್ರೆ. ತಪ್ಪೆನು? ಧರ್ಮೋ ರಕ್ಷತಿ ರಕ್ಷತಾಃ.

ಪತ್ರಕರ್ತ : ಸರ್ ಇದರಿಂದಾ ಮಕ್ಕಳ ಭವಿಷ್ಯ ಹಾಳೋಗೋದಿಲ್ವಾ

ಭಕ್ತಾಸುರ : ರೀ ಸ್ವಾಮಿ ಮಕ್ಕಳ ಭವಿಷ್ಯಕ್ಕಿಂತಾ ಈ ದೇಶದ ಭವಿಷ್ಯ ಮುಖ್ಯ, ನಮ್ಮ ಧರ್ಮ ಉಳಿಯೋದು ಮುಖ್ಯ. ಎಲ್ಲರೂ ಓದಿ ನೌಕರಿ ಹಿಡಿದು ಬೆಂಗಳೂರಿಗೋ ಬಾಂಬೆಗೋ ಇಲ್ಲಾ ಬೇರೆ ದೇಶಕ್ಕೋ ಹೋಗಿ ಸೆಟಲ್ ಆದ್ರೆ ಇಲ್ಲಿ ಅಪಾಯದಲ್ಲಿರುವ ನಮ್ಮ ಶ್ರೇಷ್ಠ ಧರ್ಮ ರಕ್ಷಿಸೋರು ಯಾರು?

ಪತ್ರಕರ್ತ : ಸರ್. ಓದೋದು ಬಿಟ್ಟು ಗಲಭೆ ಗಲಾಟೆ ಮಾಡೋದ್ರಲ್ಲಿ ನಿಮ್ಮನೇ ಮಕ್ಳು ಎಷ್ಟು ಜನ ಅವ್ರೆ?

ಭಕ್ತಾಸುರ : ಇಂತವುಕ್ಕೆಲ್ಲಾ ನಮ್ಮನೆ ಮಕ್ಕಳು ಯಾಕ್ರೀ ಬೇಕು. ಬೇರೆಯವ್ರ ಮಕ್ಕಳು ಇರೋದಾದ್ರೂ ಯಾಕೆ. ಹೋಗ್ರಿ ಹೋಗಿ..

ಪತ್ರಕರ್ತ : ಮತ್ತೆ ಫೇಲಾದವ್ರಲ್ಲಿ ನಿಮ್ಮನೆ ಮಕ್ಕಳು..

ಭಕ್ತಾಸುರ : ನಮ್ಮನೆ ಹುಡುಗ್ರು ಪಾಸಾಗವ್ರೆ. ಅದೆಲ್ಲಾ ನಿಮಗ್ಯಾಕೆ? ಲವ್ ಜಿಹಾದ್ ವಿರೋಧಿಸಬೇಕಿದೆ. ಮತಾಂತರ ನಿಲ್ಲಿಸಬೇಕಿದೆ.. ಹಿಂದೂ ಧರ್ಮ ಉಳಿಸಬೇಕಿದೆ. ದೇಶಭಕ್ತಿ ಅಂದ್ರೆ ಇದು.. ಜೈಶ್ರೀರಾಂ 

ಪತ್ರಕರ್ತ : ಅಲ್ಲಾ ಸರ್..

ಭಕ್ತಾಸುರ : ಅದೇ ಅಲ್ಲಾ ಅನ್ನೋರನ್ನ ಇಲ್ಲಾ ಅನ್ನಿಸ್ಬೇಕಿದೆ. ಬಂದ್ ಬಿಡ್ತಾರೆ ಮೈಕ್ ಹಿಡ್ಕೊಂಡು ದೇಶದ್ರೋಹಿಗಳು. ವಿದ್ಯೆ ಅಂತೆ ವಿದ್ಯೆ. ಎಲ್ಲಾರ ಮಕ್ಕಳು ವಿದ್ಯೆ ಕಲಿತ್ರೆ ಧರ್ಮ ಉಳಿಸೋರು ಯಾರು? ( ಮೈಕ್ ಕಿತ್ಕೊಂಡು) ಇಂತವರೆಲ್ಲಾ ಪತ್ರಕರ್ತರಂತೆ.. ಜೈ ಭಜರಂಗಬಲಿ. ಜಾಸ್ತಿ ಮಾತಾಡಿದ್ರೆ ಇಲ್ಲೇ ಈಗಲೇ ಹಾಕ್ತಿನೋಡು ನಿಂದೇ ಬಲಿ..

ಪತ್ರಕರ್ತ : ಸರ್ ಸರ್ ಸರ್.. ನನ್ನ ಮೈಕು...

- ಶಶಿಕಾಂತ ಯಡಹಳ್ಳಿ

(ಯಾವಾಗಲೂ ಪರೀಕ್ಷೆಗಳ ಫಲಿತಾಂಶದಲ್ಲಿ ನಂ 1 ಸ್ಥಾನದಲ್ಲಿರುತ್ತಿದ್ದ ಉಡುಪಿ ಹಾಗೂ ದಕ ಜಿಲ್ಲೆಗಳು 2023 ರಲ್ಲಿ 18, 19 ನೇ ಸ್ಥಾನಕ್ಕೆ ಇಳಿದಿದ್ದವು. ಮತಾಂಧರ ಹಾವಳಿಯಿಂದಾಗಿ ವಿದ್ಯಾರ್ಥಿಗಳು ಡೈವರ್ಟ ಆಗಿ ಫಲಿತಾಂಶ ಏರುಪೇರಾಗಿದ್ದನ್ನು ಕುರಿತು ಬರೆದ ವಿಡಂಬನಾತ್ಮಕ ಪ್ರಹಸನ ಇದು.)

 

Comments

Popular posts from this blog

ಅಮ್ಮಾ ಎಂದರೆ... ( ಪ್ರಹಸನ-70)

ಪ್ರಾಣ ಪ್ರತಿಷ್ಠಾಪನಾ ಪ್ರಸಂಗ (ಪ್ರಹಸನ - 72)

ಭಾರತರತ್ನ